ಮೈಸೂರು : ಕೋಲುಮಂಡೆ ಹಾಡಿನ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ರ್ಯಾಂಪರ್ ಚಂದನ್ ಶೆಟ್ಟಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಕೋಲುಮಂಡೆ ಹಾಡನ್ನು ವಿಕೃತಗೊಳಿಸಿ ಅಪಮಾನ ಮಾಡಿದ ಆರೋಪದ ಮೇಲೆ ಚಂದನ್ ಶೆಟ್ಟಿ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಅಂತರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾಸಂಘದಿಂದ ಡಿಸಿಪಿ ಪ್ರಕಾಶ್ ಗೌಡ ಅವರಿಗೆ ದೂರು ಸಲ್ಲಿಕೆಯಾಗಿದೆ. ಕಂಸಾಳೆ ಕಲಾವಿದರಾದ ಕಂಸಾಳೆ ರವಿ ಎಂಬುವರು ದೂರು ನೀಡಿದ್ದಾರೆ.
ಕೋಲುಮಂಡೆ ಹಾಡಿಗೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೋರಿ ಮರು ಚಿತ್ರೀಕರಣ ಮಾಡುವುದಾಗಿ ಚಂದನ್ ಶೆಟ್ಟಿ ಹೇಳಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಂಸಾಳೆ ಕಲಾವಿದ, ಹಾಡನ್ನು ಮರು ಚಿತ್ರೀಕರಣವನ್ನೂ ಮಾಡಬಾರದೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸೆನ್ಸಾರ್ ಮಂಡಳಿಗೂ ದೂರು ನೀಡಲು ಕಂಸಾಳೆ ಕಲಾವಿದರು ನಿರ್ಧರಿಸಿದ್ದಾರೆ.
ಚಂದನ್ ಶೆಟ್ಟಿ ವಿರುದ್ಧ ಈಗಾಗಲೇ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಭಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದು, ದೂರು ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ