ಕೊಡಗು : ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಭಾರೀ ಆತಂಕ ಮೂಡಿಸಿದೆ. ಹಂದಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದ ಯುವ ರೈತರಿಗೆ ಆಫ್ರಿಕನ್ ಹಂದಿ ಜ್ವರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ 2 ತಿಂಗಳ ಅವಧಿಯಲ್ಲೇ ಇಲ್ಲಿನ ಗಾಳಿಬೀಡು ಗ್ರಾಮದ ಪ್ರಶಾಂತ್ ಮತ್ತು ಗಣಪತಿ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಹಂದಿಗಳು ಈ ಮಾರಕ ರೋಗಕ್ಕೆ ಬಲಿಯಾಗಿವೆ.
ಇದರಿಂದ ಹಂದಿ ಸಾಗಾಣಿಕೆ ಕೇಂದ್ರಗಳು, ಸುತ್ತಮತ್ತಲ ರೈತರಲ್ಲಿ ಆತಂಕ ಎದುರಾಗಿದೆ.ಹೌದು. ಮೊದಲಿಗೆ ಹಂದಿಗಳ ಸರಣಿ ಸಾವು ಕಂಡ ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು.
ಬಳಿಕ ಹೈದರಾಬಾದ್ ಲ್ಯಾಬಿನಲ್ಲಿ ಅದನ್ನ ಪರೀಕ್ಷೆಗೆ ಒಳಪಡಿಸಿದಾಗ ಸಾವನ್ನಪ್ಪಿದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಆದ್ರೆ ಲ್ಯಾಬ್ ರಿಪೋರ್ಟ್ ಬರುವಷ್ಟರಲ್ಲಿ ಗಣಪತಿ ಅವರ ಎಲ್ಲಾ 21 ಹಂದಿಗಳು ಮೃತಪಟ್ಟಿದ್ವು. ಇನ್ನು ಪ್ರಶಾಂತ್ ಅವರು ತಮ್ಮ ಹಂದಿಗಳಿಗೆ ವ್ಯಾಕ್ಸಿನ್ ಕೊಡಿಸಿದ್ರು 9ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ಲಾಸ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ಗ್ರಾಮದಲ್ಲಿ ಐದಾರು ವರ್ಷಗಳಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ ರೈತರು ಮಾರಾಟಕ್ಕೆ ಸಿದ್ಧವಾಗಿದ್ದ ಹಂದಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಅತ್ತ ಆಪ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆ ಮತ್ತಷ್ಟು ರೋಗ ಹರಡದಂತೆ ತಡೆಯಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಹಂದಿ ಸಾಕಾಣಿಕಾ ಕೇಂದ್ರದ 1 ಕಿಲೋ ಮೀಟರ್ ವ್ಯಾಪ್ತಿ ರೋಗ ಪೀಡಿತ ವಲಯವೆಂದು ಘೋಷಣೆ ಮಾಡಿದ್ದು, ಸೋಂಕಿಗೆ ತುತ್ತಾದ ಹಂದಿಗಳ ವೈಜ್ಞಾನಿಕ ವಧೆ, ಸಂಸ್ಕಾರಕ್ಕೆ ಸೂಚನೆ ನೀಡಿದೆ.
ಒಟ್ನಲ್ಲಿ ಮೊದಲೇ ಅಕಾಲಿಕ ಮಳೆಯಿಂದ ಕಾಫಿ, ಕರಿಮೆಣಸು ಬೆಳೆ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದ ಮಂದಿ, ಪರ್ಯಾಯವಾಗಿ ಹಂದಿ ಸಾಕಾಣಿಕೆ ಮಾಡಲು ಮುಂದಾಗಿದ್ರು. ಆದ್ರೆ ಈಗ ಇದಕ್ಕೂ ಸಂಕಷ್ಟ ಶುರುವಾಗಿರೋದು ಆತಂಕಕ್ಕೆ ಕಾರಣವಾಗಿದೆ.