ಚೆನ್ನೈ: ದಲಿತ ನಾಯಕ, ತಮಿಳುನಾಡಿನ ಕಲಕುರಿಚಿಯ ಎಐಎಡಿಎಂಕೆ ಶಾಸಕ ಪ್ರಭು (35), ಬ್ರಾಹ್ಮಣ ಕುಟುಂಬ ಯುವತಿಯೊಂದಿಗೆ ವಿವಾಹವಾಗಿರುವ ಸುದ್ದಿಯು ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ಈ ಮೂಲಕ ಭಾರಿ ವಿವಾದವನ್ನೇ ಹುಟ್ಟುಹಾಕಿದೆ.
ಶಾಸಕ ಎ. ಪ್ರಭು (35), ಅದೇ ಪಟ್ಟಣದ ಸೌಂದರ್ಯ (19) ಎಂಬಾಕೆಯನ್ನು ಸೋಮವಾರ ಮುಂಜಾನೆ ಮನೆಯಲ್ಲೇ ವಿವಾಹವಾದರು. ಈ ವಿಚಾರ ತಿಳಿದ ಯುವತಿಯ ತಂದೆ ಸಾಮಿನಾಥನ್ (48) ಶಾಸಕರ ಮನೆಗೆ ಧಾವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ತಡೆದಿದ್ದರು. ಬಳಿಕ ಸಾಮಿನಾಥನ್ ಅವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅನ್ವಯ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ.
ತ್ಯಾಗತುರುಗಂನ ಮಲೈಕೋಟೈ ಗ್ರಾಮದ ಸೌಂದರ್ಯವನ್ನು ಕಳೆದ ಕೆಲವು ವರ್ಷದಿಂದ ಪ್ರೀತಿಸುತ್ತಿದ್ದರು. ಆಕೆಯ ತಂದೆ ಅದೇ ಗ್ರಾಮದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸೌಂದರ್ಯ ಬಿಎ ಎರಡನೇ ವರ್ಷ ಅಧ್ಯಯನ ಮಾಡುತ್ತಿದ್ದಾರೆ.
ಕಲಕುರಿಚಿ ಶಾಸಕ ಪ್ರಭು ನಯವಾದ ಮಾತುಗಳಿಂದ ನನ್ನ ಮಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಕ್ಟೋಬರ್ 1ರ ಸಂಜೆ 4ರ ಸಮಯದಲ್ಲಿ ಮಗಳನ್ನು ಅಪಹರಿಸಿದ್ದಾನೆಂದು ಸೌಂದರ್ಯ ತಂದೆ ಆರೋಪಿಸಿದ್ದಾರೆ. 15 ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಪ್ರಭು ಸ್ನೇಹ ಸಂಬಂಧ ಹೊಂದಿದ್ದು, ಕಳೆದ ನಾಲ್ಕ ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆವಾಗ ನನ್ನ ಮಗಳಿನ್ನೂ ಅಪ್ರಾಪ್ತೆಯಾಗಿದ್ದಳು. ನನಗೆ ಜಾತಿಯ ಸಮಸ್ಯೆ ಇಲ್ಲ. ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಿರುವುದೇ ಸಮಸ್ಯೆಯೆಂದು ಮಾಧ್ಯಮಗಳು ಎದುರು ಹೇಳಿದ್ದಾರೆ.