ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಮಯೂರಿ ಕ್ಯಾತರಿ, ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್, ಮಯೂರಿ ಅವರಿಗೆ ಬಹಳ ವರ್ಷಗಳ ಪರಿಚಯ. ಸುಮಾರು 10 ವರ್ಷಗಳ ಗೆಳೆತನದ ಬಳಿಕ ಅರುಣ್ ಮತ್ತು ಮಯೂರಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ. ಇದೊಂದು ಲವ್ ಕಂ ಅರೇಂಜ್ಡ್ ಮದುವೆಯಾಗಿದ್ದು, ಕೆಲವೇ ಜನರ ಸಮ್ಮುಖದಲ್ಲಿ ನಡೆದಿದೆ.
ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅರುಣ್ ಜೊತೆ ಮಯೂರಿ ರಾತ್ರಿ 2.30 ರಿಂದ 3 ಗಂಟೆಯ ಬ್ರಾಹ್ಮಿ ಮಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಾಹದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಹೌದು, ನಾನು ಮದುವೆ ಆಗಿದ್ದೇನೆ. ನಮ್ಮ 10 ವರ್ಷದ ಗೆಳೆತನಕ್ಕೆ ಇಂದು ಅರ್ಥ ಸಿಕ್ಕಿದೆ. ಸದ್ಯದಲ್ಲೇ ನಾವು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇವೆ’ ಎಂದು ಪೋಸ್ಟ್ ಮಾಡಿದ್ದಾರೆ. ನವ ಜೋಡಿಗೆ ಅಭಿಮಾನಿಗಳಿಂದ ಶುಭಾಶಯ ಹರಿದುಬರುತ್ತಿದೆ. ಚಿತ್ರರಂಗದ ಅನೇಕರು ಶುಭ ಹಾರೈಸುತ್ತಿದ್ದಾರೆ.
ಕಿರುತೆರೆಯಲ್ಲಿ ಮಿಂಚಿದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಯೂರಿಗೆ ಸಿಕ್ಕಿತ್ತು. ಅಜಯ್ ರಾವ್ ಜೊತೆ ನಟಿಸಿದ ‘ಕೃಷ್ಣ ಲೀಲಾ’ ಚಿತ್ರದ ಮೂಲಕ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ‘ಇಷ್ಟ ಕಾಮ್ಯ’, ‘ನಟರಾಜ ಸರ್ವೀಸ್’, ‘ಕರಿಯ 2’ ಮುಂತಾದ ಸಿನಿಮಾಗಳಲ್ಲಿ ಮಯೂರಿ ನಟಿಸಿದ್ದಾರೆ. ಪ್ರಸ್ತುತ, ಅವರು ಅಭಿನಯಿಸಿರುವ ‘ಮೌನಂ’ ಮತ್ತು ‘ಪೊಗರು’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.