ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ದಿನಕ್ಕೊಂದು ರೀತಿಯಲ್ಲಿ ಚರ್ಚೆಯಾಗುತ್ತಲೇ ಇರುವಾಗ ಇದೀಗ ಮತ್ತೋರ್ವ ನಟ ಅದೇ ರೀತಿ ಸಾವನ್ನಪ್ಪಿದ್ದಾರೆ. ನಟ ಅಕ್ಷತ್ ಉತ್ಕರ್ಷ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಸಾವಿನ ಬಗ್ಗೆ ಇದೀಗ ಹತ್ತಾರು ರೀತಿಯ ಅನುಮಾನಗಳು ವ್ಯಕ್ತವಾಗುತ್ತೆ.
ಬಿಹಾರದ ಮುಜಫರ್ ನಗರ ಮೂಲದ ಅಕ್ಷತ್ ಮುಂಬೈನಲ್ಲಿ ಉಳಿದುಕೊಂಡಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು. ಮುಜಫರ್ ನಗರದ ಸಿಕಂದರಪುರ ನಾಲಾ ರಸ್ತೆಯ ನಿವಾಸಿಯಾಗಿದ್ದ ಅಕ್ಷತ್ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್ ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು. ಅಕ್ಷತ್ ವಾಸವಾಗಿದ್ದ ಸ್ಥಳದ ಕೂಗಳತೆ ದೂರದಲ್ಲಿಯೇ ಗೆಳತಿ ಮತ್ತು ಆತನ ಗೆಳೆಯರು ವಾಸವಾಗಿದ್ದರು. ಸದ್ಯ ಅಕ್ಷತ್ ಜೊತೆಯಲ್ಲಿರುತ್ತಿದ್ದ ಗೆಳೆಯರ ಮೇಲೆ ಅನುಮಾನಗಳು ವ್ಯಕ್ತವಾಗುತ್ತಿವೆ.
ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾನೆ. ಅದಾದ ಬಳಿಕ ಅಕ್ಷತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದು ತಡರಾತ್ರಿ ಅಕ್ಷತ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮುಂಬೈ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಕ್ಷತ್ ಮಾವ ರಂಜಿತ್ ಸಿಂಗ್ ಹೇಳಿದ್ದಾರೆ.
ಅಕ್ಷತ್ ಜೊತೆ ವಾಸವಾಗಿದ್ದ ಸ್ನೇಹಾ ಚೌಹಾಣ್ ಮಾತನಾಡಿ, ಬಣ್ಣದ ಲೋಕದಲ್ಲಿ ಮಿಂಚಲು ಕಷ್ಟ ಪಡುತ್ತಿದ್ದನು.ನಿಧನಕ್ಕೂ ಮುನ್ನ ಅಕ್ಷತ್ ಫೋನ್ ನಲ್ಲಿ ಒಬ್ಬರ ಜೊತೆ ಮಾತನಾಡುತ್ತಿದ್ದನು ಎಂದು ಹೇಳಿದ್ದಾರೆ. ಆದ್ರೆ ಅಕ್ಷತ್ ಸಾವು ಹೇಗಾಯಿತು ಎಂಬುವುದು ತಿಳಿದು ಬಂದಿಲ್ಲ. ಇತ್ತ ಸ್ನೇಹಾ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.