ಬೆಂಗಳೂರು: ಪ್ರೀತ್ಸೆ ಅಂತಾ ದುಂಬಾಲು ಬಿದ್ದು, ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಹಾಡಹಗಲೇ ಆಸಿಡ್ ದಾಳಿ ನಡೆಸಿ ಪಾಗಲ್ ಪ್ರೇಮಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹೆಗ್ಗನಹಳ್ಳಿ ಕ್ರಾಸ್ ನಿವಾಸಿ, 25 ವರ್ಷದ ಯುವತಿ ಆಯಸಿಡ್ ದಾಳಿಗೆ ಒಳಗಾಗಿ ಬೆನ್ನು, ತಲೆ, ಕುತ್ತಿಗೆ ಭಾಗದಲ್ಲಿ ಸುಟ್ಟ ಗಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾರ್ಮೆಂಟ್ಸ್ ಉದ್ಯೋಗಿಯಾಗಿರುವ ಆರೋಪಿ ನಾಗೇಶ್ ತಲೆ ಮರೆಸಿಕೊಂಡಿದ್ದಾನೆ.
ಸುಂಕದಕಟ್ಟೆ ಬಸ್ ನಿಲ್ದಾಣ ಸಮೀಪದ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿ ಇದೆ. ಈ ಕಚೇರಿಯಲ್ಲಿ ಯುವತಿ ಉದ್ಯೋಗ ಮಾಡುತ್ತಿದ್ದಾರೆ. ಎಂದಿನಂತೆ ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಯುವತಿ ಕಚೇರಿಗೆ ಬಂದಿದ್ದಾರೆ. ಈಕೆ ಬರುವ ಮುಂಚೆಯೇ ಆರೋಪಿ ನಾಗೇಶ್ ಹೊಂಚು ಹಾಕಿ ಆಯಸಿಡ್ ಹಾಕಲು ಸಂಚು ರೂಪಿಸಿ ಕಾಂಪೌಂಡ್ ಬಳಿ ನಿಂತಿದ್ದನು.
ಈತ ನಿಂತಿರುವುದು ಗಮನಿಸದೆ ಯುವತಿ ಮೆಟ್ಟಿಲು ಮೂಲಕ ಕಚೇರಿ ಬಳಿ ಹೋಗಿದ್ದು, ಇನ್ನೂ ಬಾಗಿಲು ತೆರೆಯದಿದ್ದರಿಂದ ಅಲ್ಲೇ ನಿಂತಿದ್ದರು. ಆ ಸಂದರ್ಭದಲ್ಲಿ ಆರೋಪಿ ಬರುತ್ತಿರುವುದನ್ನು ಗಮನಿಸಿದ ಯುವತಿ ತಕ್ಷಣ ಆತನಿಂದ ತಪ್ಪಿಸಿಕೊಳ್ಳಲು ಕೆಳಗೆ ಇಳಿಯುತ್ತಿದ್ದಾಗ ಆರೋಪಿ ಆಕೆ ಮೇಲೆ ಹಿಂದಿನಿಂದಲೇ ಆಯಸಿಡ್ ಸುರಿದಿದ್ದಾನೆ.
ಬೆನ್ನು, ಕತ್ತು, ತಲೆ ಮೇಲೆ ಆಯಸಿಡ್ ಬಿದ್ದಿದ್ದರಿಂದ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾಳೆ. ಅಕ್ಕಪಕ್ಕದವರು ನೆರವಿಗೆ ಬರುತ್ತಿರುವುದನ್ನು ಗಮನಿಸಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಭಾರೀ ಪ್ರಮಾಣದಲ್ಲಿ ಆಯಸಿಡ್ ಸುರಿದಿದ್ದರಿಂದ ಮೆಟ್ಟಿಲುಗಳ ಮೇಲೆಲ್ಲಾ ಬಿದ್ದಿದೆ.