ಮಂಗಳೂರು: ಸುರತ್ಕಲ್ ನ ಚಿತ್ರಾಪುರ ಸಮೀಪ ರಿಕ್ಷಾ ಚಾಲಕನಿಗೆ ತಲವಾರಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಚಿತ್ರಾಪುರದ ಅಮಲ್ ರಾಜ್, ಪ್ರತೀಕ್, ನಿಶಾಂತ್ ಬಂಧಿತರು. ಹಲ್ಲೆಯಿಂದ ರಿಕ್ಷಾ ಚಾಲಕ ಸುನೀಲ್ ಎಂಬವರ ತಲೆಗೆ ಗಾಯಗಳಾಗಿವೆ ಎನ್ನಲಾಗಿದೆ.
ಚಿತ್ರಾಪುರ ಕಡಲ ಕಿನಾರೆಯಲ್ಲಿ ಕಡಲು ಕೊರೆತ ತಡೆಗೆ ಹಾಕಲಾಗಿದ್ದ ಕಲ್ಲುಗಳಲ್ಲಿ ಹಲವು ದಿನಗಳಿಂದ ಯುವಕರ ತಂಡವೊಂದು ಮಾದಕ ವ್ಯಸನ ಮಾಡುತ್ತಿತ್ತು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಸ್ಥಳೀಯರು ಭಾನುವಾರ ಸಂಜೆ ತಂಡ ಇದ್ದ ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಎಚ್ಚರಿಕೆ ನೀಡಿದ್ದ ಸ್ಥಳೀಯರ ತಂಡದಲ್ಲಿ ರಿಕ್ಷಾ ಚಾಲಕ ಸುನೀಲ್ ಇದ್ದರು ಎನ್ನಲಾಗಿದ್ದು, ಈ ಕಾರಣಕ್ಕಾಗಿ ಆರೋಪಿಗಳು ರಿಕ್ಷಾವನ್ನು ತಡೆದು ಸುನೀಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಸ್ಥಳೀಯರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಅಮಲ್ ಎಂಬಾತನ್ನು ವಶಕ್ಕೆ ಪಡೆದಿದ್ದರು. ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಬಳಿಕ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಪ್ರತೀಕ್ ಮತ್ತು ನಿಶಾಂತ್ನನ್ನು ಬಂಧಿಸಿದ್ದಾರೆ.