ಉಡುಪಿ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಮಣಿಪಾಲ ಸೆಂಟ್ರಲ್ ಪಾರ್ಕ್ ಹೋಟೇಲಿನ ಬಳಿ ಮೊನ್ನೆ ರಾತ್ರಿ ನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸಾಹಿನ್ ಎಸ್.ಕೆ.(18) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಪುಲ್ ಚೌದುರಿ, ಸುಕ್ದೇಬ್ ಕರ್ಮಾಕರ್ ಎಂಬವರು ಗಾಯಗೊಂಡಿದ್ದಾರೆ. ಇವರೆಲ್ಲರು ಹೊಟೇಲ್ ಕಾರ್ಮಿಕರಾಗಿದ್ದಾರೆ.
ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ದೀಕ್ಷಿತ್ ಜಿ.ರಾಜ್ ಎಂಬಾತ ಚಲಾಯಿಸುತ್ತಿದ್ದ ಕಾರು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಪೆರ್ಡೂರಿನ ಸಂತೋಷ್ ಕುಲಾಲ್ ಎಂಬವರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ನಂತರ ಚಾಲಕ, ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದನು ಎಂದು ತಿಳಿದುಬಂದಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಸಾಹಿನ್ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.