ನಟ ಆಮಿರ್ ಖಾನ್ ಇತ್ತೀಚಿನ ದಿನಗಳಲ್ಲಿ ನಟನೆಗಿಂತಲೂ ಚಿತ್ರ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದೀಗ ತಮ್ಮ ಆಮಿರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನ ಆಧಾರಿತ ಸ್ಫೂರ್ತಿದಾಯಕ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ.
ಒಡಿಶಾದ ಸಣ್ಣ ಹಳ್ಳಿಯೊಂದರಿಂದ ಆರಂಭವಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗಿನ ದ್ರೌಪದಿ ಮುರ್ಮು ಅವರ ರೋಮಾಂಚನಕಾರಿ ಜೀವನದ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತದೆ.
2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಇವರು, ಈ ಹುದ್ದೆಗೇರಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಅವರ ನಿರ್ಮಾಣದ ‘ರುಬಾರು ರೋಶಿ’ (2019) ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದ ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಅವರೇ ಈಗ ಈ ಹೊಸ ಸಾಕ್ಷ್ಯಚಿತ್ರವನ್ನೂ ನಿರ್ದೇಶಿಸಲಿದ್ದಾರೆ.
ಮತ್ತೊಂದೆಡೆ, ಆಮಿರ್ ಖಾನ್ ಸದ್ಯ ತಮ್ಮ ನಿರ್ಮಾಣದ, ರಾಜ್ಕುಮಾರ್ ಸಂತೋಷಿ ನಿರ್ದೇಶನದ ಹಾಗೂ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಲಾಹೋರ್ 1947’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾವು ಆಗಸ್ಟ್ 14ರಂದು ತೆರೆಕಾಣಲು ಸಜ್ಜಾಗಿದೆ.


