ಉಡುಪಿ: ಮುಂದಿನ ದಿನಗಳಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಜನಿಸಿರುವ ಮಕ್ಕಳ ಮನೆಗೇ ಜನನ ಪ್ರಮಾಣ ಪತ್ರದ ಜತೆಗೆ ನಗರಸಭೆಯಿಂದ ಸಿಹಿತಿಂಡಿಯೂ ಇರಲಿದೆ!
ಸಾರ್ವಜನಿಕರು ಜನನ ಪ್ರಮಾಣ ಪತ್ರವನ್ನು ನಗರಸಭೆಯಲ್ಲಿ ಪಡೆಯಲು ಪ್ರಯಾಸಪಡುವುದನ್ನು ಗಮನಿಸಿದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಜನರ ಕಷ್ಟ ಪರಿಹಾರಕ್ಕೆ ಇಂಥದ್ದೊಂದು ಹೊಸ ಹಾಗೂ ಮಾದರಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಯೋಜನೆಯ ನಿಟ್ಟಿನಲ್ಲಿ ನಗರದಲ್ಲಿ ಜನಿಸಿದ ಪ್ರತಿ ಮಗುವಿನ ಮನೆಗೆ ಜನನ ಪ್ರಮಾಣ ಪತ್ರವನ್ನು ಸ್ವೀಟ್ ಬಾಕ್ಸ್ ಜತೆಗೆ ಮಗುವು ನಗರದ ಶ್ರೇಷ್ಠ ಪ್ರಜೆಯಾಗಿ ರೂಪುಗೊಳ್ಳಲಿ ಎಂಬ ಶುಭ ಸಂದೇಶದೊಂದಿಗೆ ತಲುಪಿಸಲು ಚಿಂತನೆ ನಡೆಸಲಾಗುತ್ತಿದೆ.
ಇನ್ನು ಯೋಜನೆಯ ಅನುಷ್ಠಾನಕ್ಕೆ ಸಿಬಂದಿ ನಿರ್ವಹಣೆಯೇ ಸವಾಲು. ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ನಗರಸಭೆ ರೂಪುರೇಷೆ ಸಿದ್ಧಪಡಿಸಲಿದೆ. ಇದಕ್ಕೆ ನಿರ್ದಿಷ್ಟ ಸಿಬಂದಿಯನ್ನು ನಿಯೋಜಿಸಿದಾಗ ಮಾತ್ರ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯ. ನಗರ ವ್ಯಾಪ್ತಿಯ ನಾಗರಿಕರಿಗೆ ನಗರಸಭೆಯಿಂದ ಸುಲಭವಾಗಿ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸುತ್ತಿದ್ದೇವೆ. ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಇದಕ್ಕೊಂದು ಸ್ಪಷ್ಟ ರೂಪ ನೀಡಿ, ಅನುಷ್ಠಾನ ಮಾಡಲಿದ್ದೇವೆ. ನಗರಸಭೆ ವ್ಯಾಪ್ತಿಯಿಂದ ಹೊರಗಿರುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಉಡುಪಿಯ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.