ಕೇರಳ: ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಕೇರಳದ ಕಂಜಿರಪಲ್ಲಿಯ ಎಂಬಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಮಾವಿನ ಹಣ್ಣು ಕದಿಯೋ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇರಳದ ಡಿಜಿಪಿ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಶಿಹಾಬ್ ಅಮಾನತಾದ ಅಧಿಕಾರಿ.
ಇಡುಕ್ಕಿಯಲ್ಲಿರುವ ಎಆರ್ ಕ್ಯಾಂಪ್ನಲ್ಲಿ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾವಿನ ಹಣ್ಣುಗಳನ್ನು ಕದ್ದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಹಾಬ್ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಮುಂಡಕ್ಕಯಂ ಪೊಲೀಸರು ಶಿಹಾಬ್ ನನ್ನು ಬಂಧಿಸಿದ್ದರು. ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪೊಲೀಸ್ ಕೆಲಸಕ್ಕೆ ಸೇರುವ ಮುನ್ನ ಅಂದರೆ, 2007ರಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್ ವಿರುದ್ಧ ಕೇಸು ದಾಖಲಾಗಿತ್ತು. ಇದಿಷ್ಟೇ ಅಲ್ಲದೇ ಗಣಿಗಾರಿಕೆ ಮಾಫಿಯಾಗಳ ಸಂಪರ್ಕ ಸೇರಿ ಹಲವು ಆರೋಪ ಶಿಹಾಬ್ ಮೇಲೆ ಇತ್ತು. ಇದೀಗ ಡಿಜಿಪಿ ಶಿಹಾಬ್ ಗೆ ಅಮಾನತು ಮಾಡಿದ್ದಾರೆ.