ಬೀದರ್; ನಿಜಕ್ಕೂ ಈ ಸುದ್ದಿ ಓದಿದ್ರೆ ನೀವೆಲ್ಲಾ ಬಿದ್ದು ಬಿದ್ದು ನಗ್ತೀರಾ… ಯಾರಪ್ಪಾ ನೀನು ನಿನ್ನ ಪಾದ ಜೆರಾಕ್ಸ್ ಮಾಡಿಕೊಡು ಅಂತಾ ಕೇಳೋಣ ಅನ್ಸುತ್ತೆ. ಅಂತಹ ವಿಚಿತ್ರ ಪ್ರಸಂಗವೊಂದು ಬೀದರ್ ನಲ್ಲಿ ನಡೆದಿದೆ.
ಬೀದರ್ ಔರಾದ್ ನಲ್ಲಿ ಮಹಾನುಭಾವನೊಬ್ಬ ತನ್ನ ಊರಿಗೆ ಹೋಗಲು ಬಸ್ ಇಲ್ಲ ಅಂತಾ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ ನ್ನು ತೆಗೆದುಕೊಂಡು ಹೋಗಿದ್ದಾನೆ. ಹೀಗೆ ಹೋದ ಭೂಪ ಬಸ್ ನ್ನು ರೋಡಿನಲ್ಲಿ ಕೊಂಡೊಯ್ಯೋದು ಬಿಟ್ಟು ಡಿವೈಡರ್ ಮೇಲೆ ಹತ್ತಿಸಿ ಮಹಾ ಯಡವಟ್ಟು ಮಾಡಿದ್ದಾನೆ.
ಹೌದು…ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ನಿನ್ನೆ ಬೆಳಿಗ್ಗೆಯಿಂದ ಬಸ್ ನಿಲ್ದಾಣದಲ್ಲಿ ಕುಳಿತರೂ ಆತನಿಗೆ ತನ್ನ ಊರಿಗೆ ಹೋಗಲು ಬಸ್ ಸಿಕ್ಕಿಲ್ಲ.ಕೊನೆಗೆ ಕಾದು ಕಾದು ರೊಚ್ಚಿಗೆದ್ದ ಮಹಾಪುರುಷ ಯಶಪ್ಪ, ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ದಾಣದಲ್ಲಿ ತಂದು ನಿಲ್ಲಿಸಿದ್ದ ಬಸ್ ನ್ನು ತನ್ನೂರಿಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಬಸ್, ಬಸ್ ನಿಲ್ದಾಣದ ಪಕ್ಕದ ಡಿವೈಡರ್ ಮೇಲೇರಿದೆ. ಬಸ್ ನಲ್ಲಿದ್ದ ಇತರ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಅಂದ್ಹಾಗೆ ಈತ ಇಂತಹದ ಮಹಾನ್ ಸಾಧನೆ ಮಾಡೋದಕ್ಕೆ ಕಾರಣ ಹೊಟ್ಟೆ ಸೇರಿದ್ದ ಪರಮಾತ್ಮ. ಇನ್ನು ಅಪಘಾತದ ಬಳಿಕ ಕುಡುಕ ಯಶಪ್ಪ ಸೂರ್ಯವಂಶಿ ಓಡಿ ಹೋಗಲು ಯತ್ನಿಸಿದ್ದಾನೆ.ಈ ವೇಳೆ ಸಾರ್ವಜನಿಕರ ಸಹಾಯದಿಂದ ಎಎಸ್ಐ ಆತನನ್ನು ಹಿಡಿದು ಔರಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮುಂದೇನ್ ಆಗಿರುತ್ತೆ ನೀವೇ ಊಹಿಸಿಕೊಳ್ಳಿ.. ಈ ಸುದ್ದಿ ಕೇಳಿದ ಅನೇಕರು ಇದೆಲ್ಲಾ ಮಹಿಳೆಯರಿಗೆ ಸರ್ಕಾರ ಉಚಿತ ಪ್ರಯಾಣ ಘೋಷಣೆ ಮಾಡಿರೋದರಿಂದ ರೊಚ್ಚಿಗೆದ್ದ ಎಫೆಕ್ಟ್ ಅಂತಾ ಗುಸುಗುಸು ಪಿಸುಪಿಸು ಅಂತಿದ್ದಾರೆ.