ಬಂಟ್ವಾಳ: ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಸನ್ನಿಧಿ ಎಲ್.ಎಸ್. ಅವರು ಮತದಾನ ಜಾಗೃತಿಯ ಹಿನ್ನೆಲೆಯಲ್ಲಿ ರಾಜ್ಯ ಚುನಾವಣ ಆಯೋಗದ ಮುಖ್ಯಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಪುರಸ್ಕರಿಸಿರುವ ಆಯೋಗ ಆಕೆಯ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗೆ ಆದೇಶಿಸಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಾಲಕಿಯು ತನ್ನ ಸ್ನೇಹಿತರ ಜತೆಗೂಡಿ ಬಾಳಿಲ ಭಾಗದಲ್ಲಿ ಮತದಾನದ ಕುರಿತು ಜಾಗೃತಿಯ ಕಾರ್ಯ ಮಾಡಿದ್ದು, ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭ ಶೇ. 100 ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ತಾವು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದರು.
ಇನ್ನು ಸನ್ನಿಧಿ ಅವರ ಪ್ರಸ್ತಾವನೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಚುನಾವಣೆಗೆ)ಯ ಸರಕಾರದ ಅಧೀನ ಕಾರ್ಯದರ್ಶಿ ಮಧು ಎ.ಸಿ. ಅವರು ಪತ್ರ ಬರೆದು ಆದೇಶಿಸಿದ್ದಾರೆ. ಡಿಸಿಯಿಂದ ಸಮ್ಮಾನ ರಾಜ್ಯ ಚುನಾವಣಾ ಆಯೋಗದಿಂದ ಶಹಬ್ಬಾಸ್ ಗಿರಿ ಪಡೆದಿರುವ ಸನ್ನಿಧಿ ಕಶೆಕೋಡಿ ಅವರನ್ನು ಮಂಗಳವಾರ ದ.ಕ. ಜಿಲ್ಲಾಧಿಕಾರಿ ಮು ಮುಗಿಲನ್ ಸಮ್ಮಾನಿಸಿದರು. ಸನ್ನಿಧಿ ಜತೆ ಕೆಲಕಾಲ ಮಾತುಕತೆ ನಡೆಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.