ಅಮರಾವತಿ: ಪತ್ನಿ ತನಗೆ ಇಷ್ಟ ಬಂದಂತೆ ಅಡುಗೆ ಮಾಡುತ್ತಿದ್ದಾಳೆಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಡೂರು ಮಂಡಲದ ಪಿಂಡಿವಾನಿಪಾಲೆಂ ಗ್ರಾಮದಲ್ಲಿ ನಡೆದಿದೆ.
ಅಡುಗೆ ಒಂದು ಸ್ವಲ್ಪವೂ ರುಚಿಯಾಗಿರುವುದಿಲ್ಲ ಎಂದು ಮನನೊಂದು ಮೃತಪಟ್ಟ ವ್ಯಕ್ತಿ ತಿರುಮಲ ರಾವ್. ಈತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಿರ್ಮಲಾ ಜ್ಯೋತಿ ಹಾಗೂ ತಿರುಮಲ ರಾವ್ ಮದುವೆ ಆಗಿ ಒಂದು ವರ್ಷ ಕಳೆದಿತ್ತು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ. ಆದರೆ ತಿರುಮಲ ರಾವ್ ಮದ್ಯವ್ಯಸನಿಯಾಗಿದ್ದ. ಇದರ ಜೊತೆಗೆ ಪತ್ನಿ ನಿರ್ಮಲಾ ಜ್ಯೋತಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ.
ತಿರುಮಲ ರಾವ್ ಕುಡಿದು ಮನೆಗೆ ಬಂದ್ದಿದ್ದು, ನಂತರದಲ್ಲಿ ಪತ್ನಿ ನಿರ್ಮಲಾ ಮಾಡಿದ ಅಡುಗೆ ರುಚಿಯಾಗಿಲ್ಲ ಎಂದು ಜಗಳವಾಡಿದ್ದಾನೆ. ಇದರಿಂದ ಮನನೊಂದು ತಿರುಮಲ ರಾವ್ ಮನಿ ಬಿಟ್ಟು ಅದೇ ಗ್ರಾಮದಲ್ಲಿರುವ ತನ್ನ ಸ್ನೇಹಿತ ಗೋಪಿಯ ಮನೆಗೆ ಹೋಗಿದ್ದ. ಆದರೆ ಮುಂಜಾನೆ ಗೋಪಿ ಕೆಲಸಕ್ಕೆ ಹೋದಾಗ ತಿರುಮಲ ರಾವ್ ಕ್ರಿಮಿನಾಶಕ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ.
ವಿಷಯ ತಿಳಿದ ನೆರೆಹೊರೆಯವರು ನಿರ್ಮಲಾ ಅವರಿಗೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಾಕರಿಯಾಗದೇ ತಿರುಮಲ ರಾವ್ ಮಚಲಿಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪ್ರಕರಣ ಸಂಬಂಧ ನಿರ್ಮಲಾ ಪೇಡಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.