ರಾಮನಗರ: ನಗರದ ದಯಾನಂದ ಸಾಗರ ಆಸ್ಪತ್ರೆಯ ಶೌಚಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ ಪ್ರಕರಣದಲ್ಲಿ ಹಾರೋಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ನೇಪಾಳ ಮೂಲದ ಅಮೃತ ಕುಮಾರಿ (21) ಹಾಗೂ ಸುರೇಂದ್ರ ಮೆಹ್ರಾ (22) ಎಂದು ಗುರುತಿಸಲಾಗಿದೆ.
ನ. 24ರಂದು ದಯಾನಂದ ಸಾಗರ ಆಸ್ಪತ್ರೆಯ ಶೌಚಾಲಯ ಬ್ಲಾಕ್ ಆಗಿದ್ದ ಪರಿಣಾಮ ಆಸ್ಪತ್ರೆ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿತ್ತು. ಆರೋಪಿಗಳು ಆಗ ತಾನೆ ಹುಟ್ಟಿದ ಮಗುವನ್ನು ಕಮೋಡ್ ಗೆ ಹಾಕಿದ್ದು, ನಂತರದಲ್ಲಿ ಫ್ಲಶ್ ಮಾಡಿ, ಅಲ್ಲಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಘಟನೆ ಕುರಿತಂತೆ ಹಾರೋಹಳ್ಳಿ ಪೊಲೀಸ್ ಠಾಣೆಗೆ ದಯಾನಂದ ಸಾಗರ ಆಸ್ಪತ್ರೆ ವೈದ್ಯರು ದೂರು ದಾಖಲಿಸಿ, ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದು, ಇದೀಗ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಅಮೃತ ಕುಮಾರಿ ಹಾಗೂ ಸುರೇಂದ್ರ ಮೆಹ್ರಾ ಅವರು ಹಾರೋಹಳ್ಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮದುವೆಯಾಗದೇ ಕಳೆದ ಎರಡು ವರ್ಷಗಳಿಂದ ಜೊತೆಯಲ್ಲಿಯೇ ವಾಸವಾಗಿದ್ದರು. ಯುವತಿಯು ಗರ್ಭಿಣಿಯಾಗಿದ್ದು, ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆತರಲಾಗಿತ್ತು.
ಈ ಸಂದರ್ಭದಲ್ಲಿ ಶೌಚದ ಕೊಠಡಿಗೆ ತೆರಳಿದ್ದ ಟಾಯ್ಲೆಟ್ನಲ್ಲಿಯೇ ಮಗು ಜನಿಸಿದೆ. ಬಳಿಕ ಇಬ್ಬರೂ ಸೇರಿ ಯಾರಿಗೂ ತಿಳಿಯದಂತೆ ಟಾಯ್ಲೆಟ್ ಕಮೋಡ್ಗೆ ಮಗು ಹಾಕಿ ಫ್ಲಶ್ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.
ತನಿಖೆಗೆ ಸಂಬಂಧಿಸಿದಂತೆ ಪೋಲೀಸರು ಸಿಸಿಟಿವಿ ವಿಡಿಯೋ ಆಧರಿಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.