ಮೈಸೂರು: ವ್ಯಕ್ತಿಗೆ ಸಾಧಿಸುವ ಛಲವೊಂದಿದ್ದರೆ ಸಾಕು ಯಾವುದೇ ಸಮಸ್ಯೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಮೈಸೂರು ಜಿಲ್ಲೆಯ ಯುವತಿಯೊಬ್ಬರು ಸಾಕ್ಷಿಯಾಗಿದ್ದಾರೆ. ಈ ಯುವತಿಯು 10ನೇ ತರಗತಿಯಲ್ಲೇ ಶೇ.70 ರಷ್ಟು ದೃಷ್ಟಿ ಕಳೆದುಕೊಂಡಿದ್ದರು ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.
ಯುಪಿಎಸ್ಯಲ್ಲಿ 425ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಯುವತಿ ಕೆ.ಟಿ.ಮೇಘನಾ.
ಕುಡುಕೂರಿನ ತಾಂಡವಮೂರ್ತಿ ಹಾಗೂ ನವನೀತ ದಂಪತಿಯ ಪುತ್ರಿ ಮೇಘನಾ ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸಿಸುತ್ತಿದ್ದಾರೆ. 10ನೇ ತರಗತಿಯಲ್ಲಿದ್ದಾಗ ರೆಟಿನಾ ಸಮಸ್ಯೆಯಿಂದಾಗಿ ಶೇ.70 ರಷ್ಟು ದೃಷ್ಟಿಯನ್ನು ಕಳೆದುಕೊಂಡಿದ್ದ ಅವರು ಅದನ್ನು ವೈಫಲ್ಯವೆಂದು ಭಾವಿಸದೇ ತನ್ನ ಗುರಿಯತ್ತ ಮುಂದುವರಿದಿದ್ದರು. ಮೇಘನಾ 2020ರಲ್ಲೂ ಯುಪಿಎಸ್ಸಿಯಲ್ಲಿ 465ನೇ ಬ್ಯಾಂಕ್ ಪಡೆದಿದ್ದರು. 2015 ರಲ್ಲಿ ಕೆಎಎಸ್ ನಲ್ಲಿ 11ನೇ ರಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಖಜಾನೆ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ.