ಪುತ್ತೂರು: ಇಪತ್ತು ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತನನ್ನು ತಮಿಳುನಾಡಿನಲ್ಲಿ ವಾಸವಾಗಿರುವ ಚೆನ್ನಕೇಶವ ಅಲಿಯಾಸ್ ಸೂರ್ಯರಾಜ್ ಎಂದು ಗುರುತಿಸಲಾಗಿದೆ. ತಮಿಳುನಾಡು ತಿರುನಾಳ್ಲ್ಲಿ ಜಿಲ್ಲೆಯ ವಿ.ಜಿ.ಪಿ ಮರ್ಫಿನಗರ ಎನ್.ಜಿ.ಒ.ಎ ಕಾಲೋನಿಯಲ್ಲಿ ಈತ ವಾಸವಾಗಿರುವ ಮಾಹಿತಿ ಮೇರೆಗೆ ಪೊಲೀಸರು ತೆರಳಿ ಆತನನ್ನು ವಶಪಡಿಸಿಕೊಂಡಿದ್ದಾರೆ. ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರುಗಳಾದ ರಾಜೇಶ್, ನಸೀನ್ ತಾಜ್ ರವರ ಆದೇಶದಂತೆ ಪರಮೇಶ್ವರ, ಜಗದೀಶ್ ಮತ್ತು ಕೇಶವ ಅವರು ಶನಿವಾರ ರಾತ್ರಿ ಆತನನ್ನು ದಸ್ತಗಿರಿ ಮಾಡಿ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪಡೀಲ್ನಲ್ಲಿ ಗೂಡಂಗಡಿ ನಡೆಸುತ್ತಿದ್ದ ಕುದ್ಮಾರು ಪಟ್ಟೆ ಮನೆಯ ದಾಮೋದರ ಗೌಡ ಅವರು 2002 ಜೂನ್10ರಂದು ತಮ್ಮ ಗೂಡಂಗಡಿಗೆ ಬೀಗ ಹಾಕಿ ಮನೆಗೆ ಬಂದಿದ್ದರು. ಆದರೆ ಮರುದಿನ ಬೆಳಗ್ಗೆ ಗೂಡಂಗಡಿಗೆ ಬಂದಾಗ ಗೂಡಂಗಡಿಯ ಬೀಗ ಮುರಿದ ಸ್ಥಿತಿಯಲ್ಲಿತ್ತು. ಒಳಗೆ ಹೋಗಿ ನೋಡಿದಾಗ ಅಂಗಡಿಯಲ್ಲಿದ್ದ ಸುಮಾರು 1500 ರೂ. ದಿನನಿತ್ಯದ ಸಾಮಗ್ರಿಗಳು ಕಳ್ಳತನವಾಗಿತ್ತು. ಹೀಗಾಗಿ ಅಂಗಡಿ ಮಾಲೀಕರು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತಾದರೂ, ಬಳಿಕ ಆ ಪೈಕಿ ಮೂವರು ಖುಲಾಸೆಗೊಂಡಿದ್ದರು.
ಆದರೆ ಇನ್ನೊಬ್ಬ ಆರೋಪಿ ಚೆನ್ನಕೇಶವ ತಲೆಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯವು ಈತನ ವಿರುದ್ಧ ವಾರೆಂಟ್ ಹೊರಡಿಸಿ, ಈತನ ಪತ್ತೆಗಾಗಿ ಪರಮೇಶ್ವರ ಅವರನ್ನು ನೇಮಕ ಮಾಡಿತ್ತು.ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆತ ತಮಿಳುನಾಡಿನಲ್ಲಿ ವಾಸವಾಗಿರುವ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ಆತನನ್ನು ದಸ್ತಗಿರಿ ಮಾಡಿದ್ದಾರೆ.