ಬೆಳ್ತಂಗಡಿ: ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಬಳಿಕ ಲಾರಿ ಪರಾರಿಯಾಗಿರುವುದನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಅಳದಂಗಡಿಯ ಪಿಲ್ಯದಲ್ಲಿ ಇಂದು ರಾತ್ರಿ ನಡೆದಿದೆ. ಪ್ರವೀಣ್ ಅಚಾರ್ಯ(26) ಮೃತ ವ್ಯಕ್ತಿ.
ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯ ಮಸೀದಿ ಬಳಿ ಮೆಕ್ಯಾನಿಕಲ್ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಈಚರ್ ಲಾರಿಯೊಂದು ಡಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರ ಪ್ರವೀಣ್ ಅಚಾರ್ಯ(26) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈಚರ್ ಲಾರಿ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದೆ.
ಕೂಡಲೇ ಸಾರ್ವಜನಿಕರು ಲಾರಿಯ ಮಾಹಿತಿಯನ್ನು ಕಟ್ಟೆಯ ಯುವಕರಿಗೆ ನೀಡಿದ್ದು, ಕಾರ್ಯಪ್ರವೃತ್ತರಾದ ಯುವಕರ ತಂಡ ಬೆಳ್ತಂಗಡಿ ಕಡೆ ಪರಾರಿಯಾಗುತ್ತಿದ್ದ ಈಚರ್ ಲಾರಿಯನ್ನು ಕಟ್ಟೆ ಎಂಬಲ್ಲಿ ಅಡ್ಡಹಾಕಿ ನಿಲ್ಲಿಸಿ ಚಾಲಕ ಮತ್ತು ಈಚರ್ ಲಾರಿಯನ್ನು ವೇಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ಪ್ರವೀಣ್ ಅಚಾರ್ಯ, ವಾಹನವೊಂದರ ರಿಪೇರಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ. ಯುವಕನ ಶವ ಬೆಳ್ತಂಗಡಿ ಸರಕಾರಿ ಶವಗಾರಕ್ಕೆ ಸಾಗಿಸಾಗಿದ್ದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.