ಬೆಳ್ತಂಗಡಿ: ಕೆಲ ದಿನಗಳ ಹಿಂದೆ ನಗರದ ಹೊರವಲಯದ ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ದಂಧೆಯಲ್ಲಿ ಮಾಜಿ ಸೈನಿಕರೊಬ್ಬರ ನಾಪತ್ತೆಯಾದ 10 ಲಕ್ಷರೂ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮೇ 29 ರಂದು ಚಿಕ್ಕಮಗಳೂರು ಮೂಲದ ನಿವೃತ್ತ ಯೋಧ ಹೊಯ್ಸಳ.ಜೆ.ಪಿ, ಪಡ್ಲಾಡಿಯಲ್ಲಿ ಜೂಜು ಕಿಂಗ್ ಪಿನ್ ದಾವೂದ್ ಎಂಬಾತನ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದಲ್ಲಿ ಶಾಮೀಲಾಗಿದ್ದರು. ಈ ಸಮಯದಲ್ಲಿ ಹೊಯ್ಸಳ.ಜೆ.ಪಿಯವರ ಬ್ಯಾಗ್ ನಲ್ಲಿದ್ದ 10 ಲಕ್ಷ ರೂ ವನ್ನು ಗಮನಿಸಿದ ದಾವೂದ್ ಮತ್ತು ಆತನ ಕಡೆಯ 5-6 ಜನ ಹುಡುಗರು, ಪೊಲೀಸ್ ಪೊಲೀಸ್ ಎಂದು ಬೊಬ್ಬೆ ಹೊಡೆದಿದ್ದಾರೆ.
ಇದರಿಂದ ಹೆದರಿದ ಹೊಯ್ಸಳ.ಜೆ.ಪಿಯವರು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಸಮಯದಲ್ಲಿ ದಾವೂದ್ ಮತ್ತು ಆತನ ಸಂಗಡಿಗರು ಆಯುಧದಿಂದ ಹೊಯ್ಸಳ.ಜೆ.ಪಿಯವರಿಗೆ ಹಲ್ಲೆ ನಡೆಸಿ, ಕೈಯಲ್ಲಿದ್ದ 10 ಲಕ್ಷ ನಗದು ಇದ್ದ ಬ್ಯಾಗನ್ನು ದರೋಡೆ ಮಾಡಿಕೊಂಡು ಹೋಗಿರುವುದು ತಡವವಾಗಿ ಬೆಳಕಿದೆ ಬಂದಿದೆ.
ಕೆಲದಿನಗಳಿಂದ ಈ ಘಟನೆಯಲ್ಲಿ ಬೆಳ್ತಂಗಡಿ ಪೊಲೀಸ್ ಸಿಬ್ಬಂದಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದವು. ಇದೀಗ ದಾವೂದ್ ಮತ್ತು ಸಂಗಡಿಗರ ಮೇಲೆ ಕೇಸು ದಾಖಲಾಗಿರುವುದರಿಂದ ಪೊಲೀಸರು ತಪ್ಪು ಮಾಡಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಸತ್ಯಾ ಸತ್ಯತೆ ತನಿಖೆಯ ನಂತರವಷ್ಟೇ ಹೊರಬೀಳಬೇಕಿದೆ.