Tuesday, July 1, 2025
Homeತಾಜಾ ಸುದ್ದಿನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು: ಬದುಕುವುದಕ್ಕೂ ಬಿಡದೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು: ಪೊಲೀಸ್...

ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು: ಬದುಕುವುದಕ್ಕೂ ಬಿಡದೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು: ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿಗಳು

spot_img
- Advertisement -
- Advertisement -

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಅದಕ್ಕಾಗಿ ಅವರನ್ನು ಹತ್ಯೆ ಮಾಡಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಹಂಚಕರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಶೇಖರ ಗುರೂಜಿ ಕೊಲೆ ಬಳಿಕ ಬೆಳಗಾವಿ ಜಿಲ್ಲೆಯ ರಾಮದುರ್ಗ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಅರೆಸ್ಟ್‌ ಮಾಡಿ ಕರೆದುಕೊಂಡು ಬಂದ ಮೇಲೆ ಬರೋಬ್ಬರಿ 21 ಗಂಟೆಗೂ ಅಧಿಕ ಕಾಲ ಅಜ್ಞಾತ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಅತ್ಯಂತ ಸರಳವಾಗಿಯೇ ಉತ್ತರ ನೀಡಿರುವ ಆರೋಪಿಗಳಿಬ್ಬರು, ಗುರೂಜಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ತನಿಖೆ ಮತ್ತಷ್ಟು ಮುಂದುವರಿದಿದೆ. ಈಗಾಗಲೇ ಚಂದ್ರಶೇಖರ ಗುರುಜಿ ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರ ಹೇಳಿಕೆ ಜೊತೆಗೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರ ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆ ನಡೆದಿದೆ.

“ಚಂದ್ರಶೇಖರ ಗುರೂಜಿ ಬಳಿಯೇ 10 ರಿಂದ12 ವರ್ಷ ಕೆಲಸ ಮಾಡಿದ್ದೇವೆ. 2016ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ರಿಯಲ್‌ ಎಸ್ಟೇಟ್‌ ಸೇರಿದಂತೆ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡದೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬಿಜಿನೆಸ್‌ ಮಾಡಿದರೂ ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದರು. ಇವರಿಂದ ನಾವು ಹಲವು ಸಮಸ್ಯೆ ಎದುರಿಸಿದ್ದೇವೆ. ಬೇರೆ-ಬೇರೆ ಊರುಗಳಲ್ಲಿ ಬಿಜಿನೆಸ್‌ ಮಾಡಿದರೂ ಸಹ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ”ಎಂದು ತಪ್ಪೊಪ್ಪಿಕೊಂಡಿದ್ದಾರೆ ಅಂತಾ ಪೊಲೀಸ್‌ ಮೂಲಗಳು ತಿಳಿಸಿವೆ.

ಅಲ್ಲಿ ಕೆಲಸದಲ್ಲಿದ್ದಾಗ ಯಾವ್ಯಾವ ಹುದ್ದೆಯಲ್ಲಿದ್ದರು? ಕೆಲಸದಲ್ಲಿದ್ದಾಗ ಗುರೂಜಿ ಮತ್ತು ಇವರ ನಡುವೆ ವ್ಯವಹಾರ ಹೇಗಿತ್ತು?. ಆಗ ಹಣಕಾಸಿನ ವ್ಯವಹಾರ ಏನಾದರೂ ನಡೆದಿದೆಯೇ? ಸರಳವಾಸ್ತು ಸಂಸ್ಥೆಯಿಂದ ಹೊರಬಂದ ಬಳಿಕ ಆರೋಪಿಗಳಿಬ್ಬರು ಯಾವ ಉದ್ಯೋಗ ನಡೆಸುತ್ತಿದ್ದರು? ಎಂಬ ಬಗ್ಗೆ ಪೊಲೀಸರು ಪ್ರಶ್ನೆಗಳ ಸುರಿಮಳೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಕೆಲವೊಂದಕ್ಕೆ ಉತ್ತರ ನೀಡಿರುವ ಆರೋಪಿಗಳು, ಕೆಲವೊಂದಕ್ಕೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ. ಬಳಿಕ ಆರೋಪಿಗಳಿಬ್ಬರನ್ನು ಜೆಎಂಎಫ್‌ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಆರೋಪಿಗಳನ್ನು 10 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರಿಕೊಂಡಿದ್ದರು. ಆದರೆ ನ್ಯಾಯಾಲಯ 6 ದಿನ ಮಾತ್ರ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಈ ನಡುವೆ ಹತ್ಯೆ ನಡೆದಿರುವ ಉಣಕಲ್‌ನ ಪ್ರೆಸಿಡೆಂಟ್‌ ಹೋಟಲ್‌ನಲ್ಲಿನ ಕ್ರೈಂ ಸೀನ್‌ ಕ್ಲೀನ್‌ ಮಾಡಲಾಗಿದೆ.

ಮಂಗಳವಾರ ರಾತ್ರಿಯೇ ಆರೋಪಿಗಳಿಬ್ಬರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು ಮಹಜರು ಮಾಡಿಸಿದ್ದರು. ಬಳಿಕ ಪೊಲೀಸರ ನಿರ್ದೇಶನದಂತೆ ಕ್ರೈಂ ಸೀನ್‌ ಅನ್ನು ಹೋಟೆಲ್‌ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ.

ಪ್ರೆಸಿಡೆಂಟ್‌ ಇಲ್ಲಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಇಲ್ಲಿ ಜನಜಂಗುಳಿಯಿಂದ ಕೂಡಿರುತ್ತಿತ್ತು. ಗಣ್ಯಾತಿಗಣ್ಯರು ಇಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಯಾವಾಗ ಚಂದ್ರಶೇಖರ ಗುರೂಜಿ ಹತ್ಯೆಯಾಗಿದೆಯೋ ಆಗಿನಿಂದ ಇಲ್ಲಿ ಜನರ ಓಡಾಟ ಕಡಿಮೆಯಾಗಿದೆ. ಇನ್ನು ಬೇನಾಮಿ ಆಸ್ತಿಯ ಮೇಲೆ ಇಂದು ತನಿಖೆ ನಡೆಯಲಿದೆ.

- Advertisement -
spot_img

Latest News

error: Content is protected !!