ಬೆಂಗಳೂರು: ಮಾರ್ಚ್ 24ರಂದು ಮೊದಲ ಹಂತದ ಲಾಕ್ಡೌನ್ ಘೋಷಿಸಿದ ವೇಳೆ ದ್ವೀತಿಯ ಪಿಯು ಪರೀಕ್ಷೆ ಅಂತಿಮ ಹಂತದಲ್ಲಿತ್ತು. ಎಲ್ಲ ಪರೀಕ್ಷೆಗಳು ಮುಗಿದು ಕೇವಲ ಇಂಗ್ಲಿಷ್ ಪರೀಕ್ಷೆ ಒಂದೇ ಬಾಕಿ ಇತ್ತು. ಆದರೆ ಅದನ್ನು ನಡೆಸುವುದು ಸಾಧ್ಯವಾಗದೇ ಹೋಗಿತ್ತು. ಈಗ ಅದರ ಸಿದ್ಧತೆ ಆರಂಭವಾಗಿದ್ದು, ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸುವುದಾಗಿ ಸಚಿವರು ಈಗಾಗಲೇ ಹೇಳಿದ್ದಾರೆ.
ಇದೀಗ ಪದವಿಪೂರ್ವ ಶಿಕ್ಷಣ ಇಲಾಖೆ ಸೆಕೆಂಡ್ ಪಿಯು ವಿದ್ಯಾರ್ಥಿಗಳಿಗೆ ಹೊಸ ಸೂಚನೆಯೊಂದನ್ನು ಪ್ರಕಟಿಸಿದೆ. ಇದರಂತೆ, ಸೆಕೆಂಡ್ ಪಿಯು ವಿದ್ಯಾರ್ಥಿಗಳು ಪ್ರಸ್ತುತ ಯಾವ ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೋ ಅವರು ಇಚ್ಛಿಸಿದರೆ, ಅದೇ ಜಿಲ್ಲೆಯಿಂದಲೇ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ತೀರ್ಮಾನಿಸಿದೆ.
ಪ್ರಸ್ತುತ ವಾಸವಿರುವ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛೆ ಇರುವ ವಿದ್ಯಾರ್ಥಿಗಳು, ಕಾಲೇಜಿನ ಸಂಕೇತ ಸಂಖ್ಯೆ, ವಿದ್ಯಾರ್ಥಿಯ ಹೆಸರು, ಸ್ಟೂಡೆಂಟ್ ನಂಬರ್, ದ್ವಿತೀಯ ಪಿಯುಸಿ ರಿಜಿಸ್ಟರ್ ನಂಬರ್, ವಿದ್ಯಾರ್ಥಿಯ ಮೊಬೈಲ್ ನಂಬರ್, ಪ್ರಸ್ತುತ ವಾಸವಾಗಿರುವ ಜಿಲ್ಲೆಯ ಹೆಸರು, ಪ್ರಸ್ತುತ ಪರೀಕ್ಷೆ ಬರೆದ ಪರೀಕ್ಷಾ ಕೇಂದ್ರದ ಸಂಕೇತದ ಮಾಹಿತಿಗಳನ್ನು [email protected] ಅಥವಾ ಇಲಾಖೆ ಕಚೇರಿಗೆ ಖುದ್ದಾಗಿ ತಲುಪಿಸಬೇಕು. ವಾಟ್ಸಾಪ್ ಮೂಲಕ ತಲುಪಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.