ಉಡುಪಿ: ಅತ್ತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಸಾವಿರದ ಗಡಿಯನ್ನು ದಾಟಿದ್ದರೆ, ಇತ್ತ ಕರಾವಳಿಯಲ್ಲಿ ಕೋವಿಡ್-19 ಅಬ್ಬರ ಜೋರಾಗಿದೆ. ಕರಾವಳಿ ಜಿಲ್ಲೆಗಳಿಗೆ ಈಗ ದುಬೈ ನಂಟು ನುಂಗಲಾರದ ತುತ್ತಾಗಿದೆ. ಹೌದು, ಶುಕ್ರವಾರ ಮದ್ಯಾಹ್ನ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಒಂದೇ ದಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಬರೋಬ್ಬರಿ 21 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 20 ಕೇಸ್ ದುಬೈ ನಂಟು ಹೊಂದಿವೆ.
ಇದರ ಇದೀಗ ಬಂದಿರುವ ಮಾಹಿತಿ ಪ್ರಕಾರ, ದುಬೈಯಿಂದ ಉಡುಪಿಗೆ ಬಂದಿರುವ ಒಂದು ವರ್ಷದ ಮಗುವಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆರಕ್ಕೇರಿದೆ.
ಪ್ರಸ್ತುತ ಕೊರೋನಾ ಸೋಂಕು ದೃಢವಾಗಿರುವ ಉಡುಪಿಯ 6 ಮಂದಿಯನ್ನು ಟಿಎಂಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸೋಂಕು ಕಂಡು ಬಂದವರಲ್ಲಿ ಮೂವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಡಿಹೆಚ್ಓ ಸುಧೀರ್ ಚಂದ್ರ ಚೂಡಾ ಮಾಹಿತಿ ನೀಡಿದರು.
ಇವರಲ್ಲಿ ಮೂವರು ಕಾಪು, ಇಬ್ಬರು ಉಡುಪಿ ಮತ್ತು ಒಬ್ಬರು ಕಿರುಮಂಜೇಶ್ವರ ಮೂಲದವರೆಂದು ತಿಳಿದು ಬಂದಿದೆ.
ಬುಧವಾರ ದುಬೈನಲ್ಲಿ ವಿಮಾನ ಹತ್ತುವ ಮೊದಲು 168 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿತ್ತು. ಕ್ಷಿಪ್ರಗತಿಯ ಪರೀಕ್ಷೆಯಾದ್ದರಿಂದ ದುಬೈನಲ್ಲಿ ನಿಖರ ಫಲಿತಾಂಶ ಸಿಕ್ಕಿಲ್ಲ. ಮಂಗಳೂರಿಗೆ ಬಂದಿಳಿದ ನಂತರ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಪಾಸಿಟಿವ್ ವರದಿ ಬಂದಿದೆ.