ಸುಳ್ಯ: ತಾಲೂಕಿನ ಅಡ್ಕಾರು ಸಮೀಪದ ಕೋನಡ್ಕ ಪದವು ಎಂಬಲ್ಲಿ ಪಯಸ್ವಿನಿ ನದಿಗೆ ಗೆಳೆಯನೊಂದಿಗೆ ತೆರಳಿ ನೀರು ಪಾಲಾಗಿದ್ದ ಅಶ್ವಿತ್ ರವರ ಮೃತದೇಹ ಇಂದು ಬೆಳಗ್ಗೆ ದೊರೆತಿದೆ.
ಅಶ್ವಿತ್ ರ ದೇಹವನ್ನು ನೀರಿನಿಂದ ತೆಗೆಯಲು ನಿನ್ನೆ ರಾತ್ರಿ ಪ್ರಯತ್ನ ನಡೆದಿತ್ತು. ಆದರೆ ಬೆಳಕಿನ ಕೊರತೆಯಿಂದ ಕಾರ್ಯಾಚರಣೆ ವಿಳಂಬವಾಗಿದೆ. ಕೊನೆಗೆ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಇಂದು ಬೆಳಿಗ್ಗೆಯೇ ಮತ್ತೆ ಕಾರ್ಯಾಚರಣೆ ನಡೆಸಿದಾಗ ಘಟನೆ ನಡೆದ ಸ್ವಲ್ಪ ದೂರದಲ್ಲೆ ಮೃತದೇಹ ಪತ್ತೆಯಾಗಿದೆ.
ಕನಕ ಮಜಲಿನ ಅಶ್ವಿತ್ ಹಾಗೂ ಅಡ್ಕಾರಿನ ಪ್ರಸನ್ನ ಎಂಬ ಯುವಕರು ಪಯಸ್ವಿನಿ ನದಿಗೆ ತೆರಳಿದ್ದರು. ಆರಂಭದಲ್ಲಿ ಇಬ್ಬರೂ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಒಬ್ಬರೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಆಯತಪ್ಪಿದ ಪರಿಣಾಮ ಮಗುಚಿ ನೀರು ಪಾಲಾಗಿದ್ದರು.
ಸುಳ್ಯ ಅಗ್ನಿಶಾಮಕ ದಳ, ಪೋಲೀಸರು, ಪೈಚಾರಿನ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿ ಮೃತರ ದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.