ಹಾಸನ: ಕೊರೊನಾ ಲಾಕ್ಡೌನ್ನಿಂದು ಸುಮಾರು 42 ದಿನಗಳ ಕಾಲ ಮುಚ್ಚಿದ್ದ ಮದ್ಯದಂಗಡಿಗಳು ಕಳೆದ ಸೋಮವಾರದಿಂದ ಓಪನ್ ಆಗಿವೆ. ಈ ಕಾರಣ ಮತ್ತೆ ಎಣ್ಣೆ ಕುಡಿಯಲು ಕುಡುಕರು ಇಲ್ಲ ಸಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕುಡಿಯಲು ಹಣವಿಲ್ಲದೆ ಮನೆಯ ವಸ್ತುಗಳನ್ನೇ ಮಾರಲು ಸಿದ್ಧವಾಗುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಹಾಸನದಲ್ಲೊಂದು ಇಂತಹದೇ ಘಟನೆ ನಡೆದಿದ್ದು, ನಗರದ ವಲ್ಲಭಾಯಿ ರಸ್ತೆಯ ನಾಗರಾಜ್ ಎಂಬ ವ್ಯಕ್ತಿ ಕುಡಿಯಲು ಹಣವಿಲ್ಲದ ಕಾರಣ ಮನೆಯಲ್ಲಿ ಇದ್ದ ಹಳೇ ಟಿವಿಯನ್ನು ಮಾರಲು ಹೊರಟಿದ್ದಾನೆ.
ಈ ವೇಳೆ ಟಿವಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ದಾರಿಹೋಕರು ಪ್ರಶ್ನಿಸಿದಾಗ ನಿಜಾಂಶ ಬಾಯಿಬಿಟ್ಟಿರುವ ಮದ್ಯಪ್ರಿಯ, ಲಾಕ್ಡೌನ್ನಿಂದ ಕೆಲಸವಿಲ್ಲ, ಸಂಬಳವಿಲ್ಲ, ಮದ್ಯ ಸೇವಿಸಲು ಹಣವಿಲ್ಲ. ಹಾಗಾಗಿ ಟಿವಿ ಮಾರಲು ಹೋಗುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.

ಮೇ 4 ರಂದು ರಾಜ್ಯಾದ್ಯಂತ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಮೊದಲ ದಿನವೇ ಕರ್ನಾಟಕದಲ್ಲಿ 45 ಕೋಟಿ ಮೌಲ್ಯದ ಮದ್ಯ ಸೇಲ್ ಆಗಿತ್ತು.


