ಮಂಗಳೂರು: ರಾಜ್ಯ ಸರಕಾರ ಈ ಲಾಕ್ ಡೌನ್ ಸಮಯದಲ್ಲಿ ಶ್ರಮಿಕವರ್ಗಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಈ ಹಿಂದೆಯೇ ಒತ್ತಾಯ ಮಾಡಿತ್ತು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಬೀಡಿ ಕಾರ್ಮಿಕರು, ಟೈಲರ್, ಹೊಟೇಲ್ ಕಾರ್ಮಿಕರು, ಬಸ್ ಚಾಲಕ ನಿರ್ವಾಹಕರನ್ನು ಈ ಪ್ಯಾಕೇಜ್ ನಿಂದ ಕೈ ಬಿಟ್ಟಿದ್ದಾರೆ. ಫೋಟೋಗ್ರಾಫರ್ ಗಳನ್ನೂ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ ಗೆ ಮನವಿ ಸಲ್ಲಿಸುತ್ತೇವೆ ಎಂದರು.
ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರ ಪರದಾಟ ಘಟನೆಯ ಬಗ್ಗೆ ಮಾತನಾಡಿದ ಅವರು, ಬೇರೆ ಎಲ್ಲಾ ರಾಜ್ಯದಿಂದ ಉತ್ತರ ಭಾರತದ ಕಡೆಗೆ ರೈಲು ಹೋಗುತ್ತದೆ. ಆದರೆ ನಮ್ಮ ರಾಜ್ಯದಿಂದ ಇನ್ನೂ ರೈಲುಗಳ ಸಂಚಾರ ಆರಂಭವಾಗಿಲ್ಲ. ಇದೇ ರೀತಿ ಆದರೆ ಕಾರ್ಮಿಕರು ಮತ್ತೆ ರಾಜ್ಯಕ್ಕೆ ಬರಲ್ಲ. ರಾಜ್ಯದ ಸಹವಾಸ ಸಾಕು ಅಂತಾ ಹೋಗುತ್ತಾರೆ ಎಂದರು.
ಹಸಿವಿನಿಂದ ಜನ ರೈಲ್ವೇ ನಿಲ್ದಾಣ ಮುಂದೆ ಇದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಸಮಸ್ಯೆ ಕೇಳಿಲ್ಲ, ಕಾರ್ಮಿಕರನ್ನು ಕಳುಹಿಸದೆ ಸತಾಯಿಸಲಾಗುತ್ತಿದೆ. ಇದು ಮಾನವ ಹಕ್ಕು ಉಲ್ಲಂಘನೆ ಎಂದು ಯುಟಿ ಖಾದರ್ ಹೇಳಿದರು.


