ಮಂಗಳೂರು: ‘ಅಹಿಂದುಗಳನ್ನು ದೇವಸ್ಥಾನದ ಮತ್ತು ಹಿಂದೂಗಳ ಕಾರ್ಯಕ್ರಮಕ್ಕೆ ಕರೆಯಬೇಡಿ’ -ಎಂದು ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ. ಮಂಗಳೂರು ರಥಬೀದಿಯ ಶ್ರೀಕಾಳಿಕಾಂಬ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಈ ರೀತಿ ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.
ನಮ್ಮ ಕಾರ್ಯಕ್ರಮಕ್ಕೆ ಬಂದು ಅವರು ಏನು ಹೇಳುವುದು? ಮುಸ್ಲಿಂ, ಕ್ರಿಶ್ಚಿಯನ್ ರು ನಮಗೆ ಏನು ಹೇಳುತ್ತಾರೆ? ದೇವಸ್ಥಾನದಲ್ಲಿ ರಾಜಕೀಯ ಬೆರೆಸಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು, ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು. ನಾವು ಸುಮ್ಮನೆ ಗೌಜಿಗಾಗಿ ಅವರನ್ನು ಆಹ್ವಾನಿಸುತ್ತೇವೆ. ಅವರು ದೇವಸ್ಥಾನಕ್ಕೆ ಬಂದರೆ ದೇವರಿಗೆ ನಮಸ್ಕಾರ ಮಾಡುತ್ತಾರೆಯೇ? ತೀರ್ಥ ಪ್ರಸಾದ ಸ್ವೀಕರಿಸುತ್ತಾರಾ? ಒಂದು ವೇಳೆ ಸ್ವೀಕರಿಸಿದರೂ ಆ ಭಕ್ತಿ ಮತ್ತು ಶ್ರದ್ಧೆಯಿಂದ ತಗೋತಾರಾ? ಎಂದು ಪ್ರಶ್ನಿಸಿದ್ದಾರೆ.
ಯಾವುದೇ ರಾಜಕೀಯ ವ್ಯಕ್ತಿಯಾದರೂ ಅವರು ನಮಗೆ ಹಿಂದುವಾಗಿದ್ದರೆ ಸರಿ, ಬೇಕಾದರೆ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ರಮಾನಾಥ್ ರೈ ಅವರನ್ನು ಆಹ್ವಾನಿಸಿ, ಏನೂ ಸಮಸ್ಯೆ ಇಲ್ಲ, ಅವರಿಗೆ ದೇವರ ಬಗ್ಗೆ ಗೌರವ ಇದೆ ಅಂತಾ ನಾನು ಅಂದುಕೊಂಡಿದ್ದೇನೆ. ಆದರೆ ಉಳಿದ ಧರ್ಮಿಯರಿಗೆ ನಮ್ಮ ದೇವರ ಬಗ್ಗೆ ಗೌರವ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಇತ್ತೀಚೆಗೆ ಮಸೀದಿ ದರ್ಶನಕ್ಕೆ ಬನ್ನಿ ಎಂಬ ಹೊಸ ದೊಂಬರಾಟ ಶುರುವಾಗಿದೆ. ಮಸೀದಿ ನೋಡಲು ಹಿಂದೂಗಳನ್ನು ಕರೆಯುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಅಲ್ಲ ಅವರ ಮಸೀದಿಯಲ್ಲಿ ನೋಡಲು ಎಂಥಾ ಉಂಟು. ಇಲ್ಲಿ ನಮ್ಮ ಈ ಕಾಳಿಕಾಂಬ ದೇವಸ್ಥಾನದಲ್ಲಿಯಾದರೇ ನೋಡಲು ತುಂಬಾ ಉಂಟು, ಅಲ್ಲಿ ಎಂಥಾ ಉಂಟು? ಎಂದು ಅವರು ಪ್ರಶ್ನಿಸಿದರು.
ಮಸೀದಿ ದರ್ಶನ ಅಂತಾ ಅವರು ಕರೆದ ದಿವಸ ಮಾತ್ರ ನಾವು ಯಾಕೇ ಹೋಗಬೇಕು ? ಬಾಕಿ ದಿನ ಹೋದಾಗ ಅಲ್ಲಿ ಏನಿದೆ ಅಂತಾ ಯಾರಿಗೋತ್ತು ? ಅವರು ಅವರ ಹೆಣ್ಣು ಮಕ್ಕಳನ್ನು ಮಸೀದಿಯ ಒಳಗೆ ಹೋಗಲು ಬಿಡುವುದಿಲ್ಲ, ಮತ್ತೆ ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಮಸೀದಿಗೆ ಕರೆಯುವುದು ಯಾಕೇ, ಇದು ಬಲು ಮಜಾವಾಗಿದೆ ಎಂದು ಅವರು ವ್ಯಂಗ್ಯವಾಡಿದರು.