Saturday, June 6, 2026
Homeಕರಾವಳಿದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ಹೋಂ ಐಸೋಲೇಷನ್ ಇಲ್ಲ: ಕೋವಿಡ್ ಕೇರ್ ಸೆಂಟರ್ ದಾಖಲಾತಿ...

ದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ಹೋಂ ಐಸೋಲೇಷನ್ ಇಲ್ಲ: ಕೋವಿಡ್ ಕೇರ್ ಸೆಂಟರ್ ದಾಖಲಾತಿ ಕಡ್ಡಾಯ

- Advertisement -
- Advertisement -

ಮಂಗಳೂರು: ಕೊರೋನಾ ಪಾಸಿಟಿವ್ ಬಂದ ನಂತರ ಅರೋಗ್ಯ ಸ್ಥಿತಿ ಮತ್ತು ಮನೆಯಲ್ಲಿರುವ ವ್ಯವಸ್ಥೆಯನ್ನು ಗಮನಿಸಿ ನೀಡುತ್ತಿದ್ದ ಹೋಮ್‌ ಐಸೊಲೇಶನ್‌ (ಮನೆಯಲ್ಲೇ ಆರೈಕೆ) ವ್ಯವಸ್ಥೆಯನ್ನು ರದ್ದುಗೊಳಿಸಿ ಗ್ರಾಮೀಣ ಮತ್ತು ನಗರದ ಸ್ಲಂ ಏರಿಯಾಗಳಲ್ಲಿರುವ ಸೋಂಕಿತರು ಇನ್ನು ಮುಂದೆ ಸರಕಾರಿ ಐಸೋಲೇಶನ್‌ ಸೆಂಟರ್‌ ಅಥವಾ ಕೋವಿಡ್ ಕೇರ್ ಸೆಂಟರ್ ಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೋಮ್‌ ಐಸೊಲೇಶನ್‌ನಲ್ಲಿ ಇರುವ ಕೆಲವು ಮಂದಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುತ್ತಿರುವುದರ ಬಗ್ಗೆ ಅನೇಕ ದೂರುಗಳು ಬಂದ ನಂತರ ಹಾಗೂ ಕೆಲವು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುವಾಗ ನೀಡಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೆ ತಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದಾಗ ಐಸಿಯು ಅಥವಾ ವೆಂಟಿಲೇಟರ್‌ ಬೆಡ್‌ ಕೇಳುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರು ನಿಗದಿತ ನಿಯಮ ಗಳನ್ನು ಪಾಲಿಸುತ್ತಾರೆಯೇ ಇಲ್ಲವೇ ಎಂಬ ಸಂಶಯವಿದೆ. ಹಾಗಾಗಿ ಈ ಸ್ಥಳಾಂತರಿಸುವ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಪಾಸಿಟವ್‌ ಹೊಂದಿದ ಸೋಂಕುಪೀಡಿತ ರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 12 ಸಾವಿರ ಮಂದಿ (ಒಟ್ಟು ಸೋಂಕುಪೀಡಿತ ರಲ್ಲಿ ಶೇ.87) ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,100 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕೇರ್‌ ಸೆಂಟರ್‌ ಗಳಿದ್ದು, ಸುಮಾರು 2 ಸಾವಿರ ಮಂದಿಗೆ ವ್ಯವಸ್ಥೆ ಇದೆ. ಅಲ್ಲಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಸ್ವಲ್ಪ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡಲೇ ಸ್ಥಳಾಂತರಿಸಲಾಗುವುದು. ಅಗತ್ಯ ಬಿದ್ದರೆ ಇನ್ನಷ್ಟು ಕೇರ್‌ ಸೆಂಟರ್‌ಗಳನ್ನು ಆರಂಭಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

- Advertisement -

Latest News

error: Content is protected !!