ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಹೊರಾಂಗಣದ ಬಾವಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಂಚಿನ ಅಥವಾ ಪಂಚಲೋಹದ ದೇವರ ವಿಗ್ರಹ ಪತ್ತೆಯಾದ ಘಟನೆ ನಡೆದಿದೆ.
ಕೊಲ್ಲಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಗ್ರಾಮಸ್ಥರು ಶ್ರಮದಾನದ ಮೂಲಕ ದೇವಳದ ಬಾವಿಯನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭ ಸುಮಾರು ಅರ್ಧ ಅಡಿ ಎತ್ತರ ಹಾಗೂ 1 ಕೆಜಿ ಯಷ್ಟು ತೂಕವನ್ನು ಹೊಂದಿರುವ ಸಿಂಹದ ಮೇಲೆ ಕುಳಿತಿರುವ ದೇವಿಯ ಮೂರ್ತಿ ಕಂಡುಬಂದಿದೆ.
ಈ ಬಾವಿಯನ್ನು ಸುಮಾರು ಹತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸ್ವಚ್ಛಗೊಳಿಸಲಾಗಿದ್ದು, ಪರಿಸರದಲ್ಲಿ ಪಿಲಿಚಾಮುಂಡಿ ದೈವದ ಸ್ಥಾನವಿದ್ದು,ಇದು ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟಿರುವ ಸಾಧ್ಯತೆ ಇದ್ದು, ಆದರೆ ಇದುವರೆಗೆ ದೇವಸ್ಥಾನದಿಂದ ಅಥವಾ ದೈವಸ್ಥಾನದಿಂದ ಯಾವುದೇ ಮೂರ್ತಿ ಕಾಣೆಯಾಗಿರುವುದಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮೂರ್ತಿಯನ್ನು ದೇವಸ್ಥಾನದ ಕಚೇರಿಯಲ್ಲಿ ಇಡಲಾಗಿದೆ.