ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಕನಿಷ್ಟ 15 ದಿನಗಳವರೆಗೆ ಲಾಕ್ ಡೌನ್ ವಿಸ್ತರಿಸಿದರೆ ಒಳಿತು ಎಂಬುದಾಹಗಿ ಹಲವು ಸಚಿವರು ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ಕೊಟ್ಟಿದ್ದಾರೆ. ಏ.11 ರಂದು ಪ್ರಧಾನಿ ಜೊತೆ ಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆಯೋ ಅದರ ಬಳಿಕ ರಾಜ್ಯದಲ್ಲಿ ಮುಂದೇನು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಏ.14ರ ಬಳಿಕ ರಾಜ್ಯದ್ಯಂತ ಲೌಕ್ ಡೌನ್ ಮುಂದುವರೆಸಬೇಕಾ ಅಥವಾ ಕೊರೊನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮುಂದುವರೆಸಬೇಕಾ ಎಂಬ ಬಗ್ಗೆ ಸಿಎಂ ಇಂದು ಸಚಿವರೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾವಾರು ಮಾಹಿತಿ ಕಲೆಹಾಕಿದ ಸಿಎಂ, ಡಾ.ದೇವಿಶೆಟ್ಟಿ ನೇತೃತ್ವದ ಕೋವಿಡ್-19 ಟಾಸ್ಕ್ ಫೋರ್ಸ್ ಸಲ್ಲಿಸಿರುವ ವರದಿಯ ಕುರಿತಾಗಿಯೂ ಸಮಾಲೋಚನೆ ನಡೆಸಿದರು. ಈ ವೇಳೆ, ಏ.14 ರಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಹೀಗಾಗಿ ಎರಡು ತಿಂಗಳವರೆಗೆ ಪಡಿತರ ವಿತರಿಸುವಂತೆ ಸೂಚಿಸಲಾಗಿದೆ ಎಂದರು. ಇನ್ನು ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಧಾನಿ ಕೈಗೊಳ್ಳುವ ನಿರ್ಧಾರದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು. ಲಾಕ್ ಡೌನ್ ಒಂದು ಹಂತಕ್ಕೆ ಬರಬೇಕಾದರೆ, ಏ.14ರವರೆಗೆ ಜನತೆ ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದರು.
ಇದೇ ವೇಳೆ, ಲಾಕ್ ಡೌನ್ ನ್ನು ಹಂತಹಂತವಾಗಿ ತೆರವುಗೊಳಿಸಬೇಕು, ಮೇ.31 ರವರೆಗೆ ಶಾಲಾ ಕಾಲೇಜಿಗೆ ರಜೆ ಘೋಷಿಸಬೇಕು. ಸದ್ಯಕ್ಕೆ ಸಾರಿಗೆ ಸೇವೆ, ಮೆಟ್ರೋ ರೈಲು ಸೇವೆ ಬೇಡ ಎಂಬಿತ್ಯಾದಿ ಶಿಫಾರಸು ಮಾಡಲಾಗಿದೆ. ಒಂದು ವೇಳೆ, ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರೆಸಿದರೆ ಏನು ಮಾಡಬಹುದು ಎಂಬ ವಿಚಾರವಾಗಿ ಸಿಎಂ ತಮ್ಮ ಸಂಪುಟ ಸಹೋದ್ಯೇಗಿಗಳೊಂದಿಗೆ ಅಭಿಪ್ರಾಯ ಸಂಗ್ರಹಿಸಿದರು.