ಬೆಂಗಳೂರು : ರಾಜ್ಯದಲ್ಲಿ 2021 ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇದ್ದು, ಜನವರಿಂದ 10 ಮತ್ತು 12 ನೇ ತರಗತಿ ಮಕ್ಕಳಿಗೆ ಶಾಲೆಗಳ ಆರಂಭಿಸಲು ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ.
ನವೆಂಬರ್ 23 ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಉನ್ನತ ಮಟ್ಟದ ಸಭೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಶಾಲೆ ಆರಂಭಿಸದಿರಲು ತೀರ್ಮಾನ ಕೈಗೊಂಡಿತ್ತು. ಕೋವಿಡ್ ತಾಂತ್ರಿಕ ಸಮಿತಿ ನೀಡುವ ಮುಂದಿನ ವರಧಿ ಆಧರಿಸಿ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಸಿಎಂ ಯಡಿಯೂರಪ್ಪ ಹೇಳಿದ್ದರು. ಇದೀಗ ತಾಂತ್ರಿಕ ಸಮಿತಿ ಮತ್ತೊಂದು ವರದಿ ನೀಡಿ ಶಾಲೆಗಳನ್ನು ಜನವರಿ ತಿಂಗಳಿನಿಂದ ಆರಂಭಿಸುವಂತೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಈ ನಡುವೆ ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ಈ ಬಾರಿಯ ಎಸ್ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ತಡವಾಗಿ ನಡೆಸುವಂತೆಯೂ ಸಮಿತಿ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿವೆ ಎಂದು ಮೂಲಗಳು ತಿಳಿಸಿವೆ.