ಬೆಳ್ತಂಗಡಿ: ಕರಾವಳಿ ಜನರ ತೀವ್ರ ವಿರೋಧದ ನಡುವೆಯೂ ಅಂಗೀಕರಿಸಲ್ಪಟ್ಟ ಎತ್ತಿನಹೊಳೆ ನೀರಾವರಿ ಯೋಜನೆಗೆ ಮತ್ತೆ ವಿಘ್ನ ಎದುರಾದಂತೆ ತೋರುತ್ತಿದೆ.ಪಶ್ಚಿಮ ಘಟ್ಟದಿಂದ ಹರಿಯುವ ಹೆಚ್ಚುವರಿ ಮಳೆ ನೀರನ್ನು 265 ಕಿ.ಮೀ. ದೂರದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಿರುಗಿಸುವ 7 ವರ್ಷಗಳ ಹಿಂದಿನ ಎತ್ತಿನಹೊಳೆ ನೀರಾವರಿ ಯೋಜನೆ ಇನ್ನೂ ಪೂರ್ಣಗೊಳ್ಳುವಂತೆ ತೋರುತ್ತಿಲ್ಲ.
ಕೊರೊನಾದಂತಹ ಸಮಸ್ಯೆಯ ಮಧ್ಯೆ ಭೂಮಿ ಖರೀದಿ ಪ್ರಕ್ರಿಯೆಗೆ ಮುಂದಾಗಲು ರಾಜ್ಯ ಸರಕಾರದ ಬಳಿ ಅವಶ್ಯಕ ಹಣವಿಲ್ಲ. 2013ರಲ್ಲಿ 13,000 ಕೋಟಿ ರೂ.ಗಳಿದ್ದ ಯೋಜನಾ ವೆಚ್ಚದ ಪ್ರಸಕ್ತ 20,000 ಕೋಟಿ ರೂ.ಗೇರಿದೆ. ಯೋಜನೆಯ ಪ್ರಮುಖ ಭಾಗವಾಗಿರುವ ತುಮಕೂರು ಜಿಲ್ಲೆಯ ಕೊರಟಗೆರೆಯ ಬೈರಗೊಂಡ್ಲುನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಸ್ವಾಧೀನಕ್ಕೆ ದೊಡ್ಡ ಹೂಡಿಕೆಯ ಅಗತ್ಯವಿದೆ.
ಮುಂದಿನ ವರ್ಷ ಪ್ರಾಯೋಗಿಕ ನೀರೆತ್ತುವಿಕೆ ಅಧಿಕಾರಿಗಳು ಹೇಳುವಂತೆ ವಿವಿಧ ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿ ದ್ದರಿಂದ ಯೋಜನಾ ವೆಚ್ಚ ಹೆಚ್ಚುಕಮ್ಮಿಯಾಗುವುದು ಸಹಜ. ಈಗಾಗಲೇ 20 ಕಿ.ಮೀ., 50 ಕಿ.ಮೀ.ನಂತೆ ಕಾಮಗಾರಿ ಗುರಿ ಹೊಂದಲಾಗಿತ್ತು. ಪೈಪ್ ಅಳವಡಿಕೆ, ಕಾಲುವೆ, ಹಿರಿದನಹಳ್ಳಿಯಿಂದ ಹರವನಹಳ್ಳಿ ವರೆಗೆ 7 ಅಣೆಕಟ್ಟುಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಕೆಲವೆಡೆ ವಿದ್ಯುತ್ ಸಂಪರ್ಕ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ಹಂತದಲ್ಲಿದೆ. ಮುಂದಿನ ವರ್ಷ ಶೇ. 80 ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಪ್ರಾಯೋಗಿಕವಾಗಿ ನೀರೆತ್ತಲಾ ಗುವುದು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಕಾಮಗಾರಿಗೆ ವೇಗ ಸಿಗಲಿದೆ.