Monday, August 31, 2026
Homeಅಪರಾಧರಾಜಧಾನಿಯಲ್ಲಿ ಮತ್ತೊಂದು ಕರಾಳ ಘಟನೆ ವರದಿ; ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ...

ರಾಜಧಾನಿಯಲ್ಲಿ ಮತ್ತೊಂದು ಕರಾಳ ಘಟನೆ ವರದಿ; ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ದೇಶದ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಕರಾಳ ಘಟನೆ ವರದಿಯಾಗಿದ್ದು, 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಚಾಲಕ ಮತ್ತು ಕಂಡಕ್ಟರ್ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಬಸ್ಸನ್ನು ಜಪ್ತಿ ಮಾಡಿದ್ದಾರೆ.

ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿಯಾಗಿರುವ ಸಂತ್ರಸ್ತೆ, ಕುಟುಂಬದವರೊಂದಿಗೆ ಉಂಟಾದ ಸಣ್ಣ ಮುನಿಸಿನಿಂದ ಮನೆಗೆ ತಿಳಿಸದೆ ನೋಯ್ದಾದಲ್ಲಿರುವ ತನ್ನ ಸೋದರಸಂಬಂಧಿಯ ಮನೆಗೆ ತೆರಳಲು ಹೊರಟಿದ್ದಳು. ಆಗಸ್ಟ್ 4ರ ತಡರಾತ್ರಿ ಸುರಿಯುತ್ತಿದ್ದ ಭಾರೀ ಮಳೆ ಮತ್ತು ಕತ್ತಲಿನ ಕಾರಣ ಆಕೆ ತಪ್ಪಾಗಿ ಗ್ರೇಟರ್ ನೋಯ್ಡಾದ ‘ಪರಿ ಚೌಕ್‌’ ಸಿಗ್ನಲ್ ಜಂಕ್ಷನ್‌ನಲ್ಲಿ ಇಳಿದುಕೊಂಡಿದ್ದಳು. ಆ ಸಮಯದಲ್ಲಿ ದಾರಿಯಲ್ಲಿ ಸಾಗುತ್ತಿದ್ದ ಖಾಲಿ ಸ್ಲೀಪರ್ ಬಸ್‌ಗೆ ವಿದ್ಯಾರ್ಥಿನಿ ನೆರವಿಗಾಗಿ ಕೈ ತೋರಿಸಿದಾಗ, ಬಸ್ ಚಾಲಕ ಕುಲದೀಪ್ ಹಾಗೂ ಕಂಡಕ್ಟರ್ ಸಂದೀಪ್ ಆಕೆಯನ್ನು ನೋಯ್ದಾ ಸೆಕ್ಟರ್ 63ಕ್ಕೆ ತಲುಪಿಸುವುದಾಗಿ ನಂಬಿಸಿ ಬಸ್‌ಗೆ ಹತ್ತಿಸಿಕೊಂಡಿದ್ದರು.

ಬಸ್ಸು ಚಲಿಸಲು ಪ್ರಾರಂಭಿಸುತ್ತಿದ್ದಂತೆ ಕಂಡಕ್ಟರ್ ಸಂದೀಪ್ ಸಂತ್ರಸ್ತೆಯೊಂದಿಗೆ ಅಶ್ಲೀಲವಾಗಿ ವರ್ತಿಸಲು ಶುರುಮಾಡಿದ್ದು, ತದನಂತರ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಸೇರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿದ್ಯಾರ್ಥಿನಿ ಪ್ರತಿರೋಧ ಒಡ್ಡಿದಾಗ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದ ಉದ್ದಕ್ಕೂ ಈ ದೌರ್ಜನ್ಯ ಮುಂದುವರಿದಿದ್ದು, ಬಳಿಕ ಹಳೆಯ ದೆಹಲಿಯ ಕಾಶ್ಮೀರಿ ಗೇಟ್ ಐಎಸ್‌ಬಿಟಿ ಸಮೀಪದ ರಿಂಗ್ ರಸ್ತೆಯಲ್ಲಿ ಆಕೆಯನ್ನು ಬಸ್‌ನಿಂದ ಕೆಳಗೆ ತಳ್ಳಿ ಆರೋಪಿಗಳು ಪರಾರಿಯಾಗಿದ್ದರು.

ಘಟನೆಯಿಂದ ಆಘಾತಕ್ಕೊಳಗಾಗಿದ್ದ ಬಾಲಕಿ ತಕ್ಷಣ ಕಾಶ್ಮೀರಿ ಗೇಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಉತ್ತರ ದೆಹಲಿ ವಿಭಾಗದ ಡಿಸಿಪಿ ನೀಹಾರಿಕಾ ಭಟ್ ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಉತ್ತರ ದೆಹಲಿಯ ತಿಮಾರ್‌ಪುರದ ಬಸ್‌ ಪಾರ್ಕಿಂಗ್ ತಾಣದಲ್ಲಿದ್ದ ಆರೋಪಿಗಳಾದ ಕುಲದೀಪ್ ಮತ್ತು ಸಂದೀಪ್‌ನನ್ನು ಬಂಧಿಸಿದ್ದಾರೆ. ಸುರಾಜ್‌ಪುರ ಗ್ಯಾರೇಜ್‌ನಲ್ಲಿ ದುರಸ್ತಿ ಮುಗಿಸಿ ಬಸ್ಸನ್ನು ತಿಮಾರ್‌ಪುರಕ್ಕೆ ಕೊಂಡೊಯ್ಯುತ್ತಿದ್ದಾಗ ಈ ಕೃತ್ಯ ಎಸಗಲಾಗಿದ್ದು, ಖಾಲಿ ಬಸ್‌ನಲ್ಲಿ ಪರದೆಗಳು (Curtains) ಇದ್ದುದರಿಂದ ಒಳಗಿನ ಕೃತ್ಯ ಹೊರಗಿನ ಜನರಿಗೆ ಕಾಣಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ವಶಪಡಿಸಿಕೊಂಡ ಬಸ್ಸನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!