ನೇಪಾಳ: ಪ್ರವಾಹದ ಭೀಕರತೆಗೆ ಇಡೀ ಊರೇ ಕೊಚ್ಚಿಹೋಗುತ್ತಿದ್ದರೂ, ಸಮಯಪ್ರಜ್ಞೆ ಮೆರೆದ ಶಾಲಾ ಪ್ರಾಂಶುಪಾಲರೊಬ್ಬರು 1,643 ಮಕ್ಕಳ ಜೀವ ರಕ್ಷಿಸಿದ ಪವಾಡಸಾದೃಶ ಘಟನೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿ ನಡೆದಿದೆ. ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಪ್ರಾಂಶುಪಾಲ ರಾಜೇಂದ್ರ ದಾವಾಡಿ (47) ಅವರ ಈ ಸಾಹಸಕ್ಕೆ ಈಗ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಬುಧವಾರ ಬೆಳಿಗ್ಗೆ 9:20ಕ್ಕೆ ಶಾಲೆ ನಡೆಯುತ್ತಿದ್ದಾಗ ಪ್ರವಾಹದ ಸುಳಿವು ಸಿಗುತ್ತಿದ್ದಂತೆ, ರಾಜೇಂದ್ರ ಅವರು ಶಾಲೆಯ ತುರ್ತು ಗಂಟೆ ಬಾರಿಸಿ ಎಲ್ಲ ತರಗತಿಗಳಿಂದ ಮಕ್ಕಳನ್ನು ಹೊರತಂದಿದ್ದಾರೆ. ಬಳಿಕ ಶಿಕ್ಷಕರ ನೆರವಿನಿಂದ ವಿದ್ಯಾರ್ಥಿಗಳನ್ನು ಎತ್ತರದ ಪ್ರದೇಶದಲ್ಲಿದ್ದ ಬೋಧಿ ವೃಕ್ಷದತ್ತ ಕಳುಹಿಸಿದ್ದಾರೆ. ಕೊನೆಯ ಮಗು ಶಾಲೆಯ ಆವರಣದಿಂದ ಹೊರಬರುವವರೆಗೂ ಸ್ವತಃ ಅಲ್ಲೇ ನಿಂತು ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ.
ಮಕ್ಕಳು ಬೆಟ್ಟದ ಸುರಕ್ಷಿತ ಜಾಗ ತಲುಪಿದ ಕೆಲವೇ ಕ್ಷಣಗಳಲ್ಲಿ ಮೂರು ಅಂತಸ್ತಿನ ಶಾಲಾ ಕಟ್ಟಡ ನೀರು-ಕೆಸರಿನ ರಭಸಕ್ಕೆ ಕೊಚ್ಚಿಹೋಗಿದೆ. ರಾಜೇಂದ್ರ ಅವರ ಧೈರ್ಯದಿಂದಾಗಿ ದೊಡ್ಡ ದುರಂತ ತಪ್ಪಿದಂತಾಗಿದೆ. ಆದರೆ, ಶಾಲೆಯ ಬಾಗಿಲು ಮುಚ್ಚಲು ತೆರಳಿದ್ದ ಸಿಬ್ಬಂದಿ ಸುಲ್ತಾನ್ ಲಾಮಾ ಹಾಗೂ ಶಿಕ್ಷಕ ಸಂತೋಷ್ ಪರಿಹಾರ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದು, ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವು ಪ್ರಾಂಶುಪಾಲರನ್ನು ಕಾಡುತ್ತಿದೆ.


