ಬೆಳ್ತಂಗಡಿ; ದೇವರು ಮಳೆಯ ರೂಪದಲ್ಲಿ ನಮಗೆ ನೀಡುವ ಜಲ ಅದು ನಮ್ಮೆಲ್ಲರ ಜೀವಜಲ. ಅದನ್ನು ಸಂರಕ್ಷಿಸಿ ಸುಂದರ ಪ್ರಕೃತಿಯನ್ನು ನಾಳೆಗೆ ಉಳಿಸಿಹೋಗಬೇಕು ಎಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನ ಪ್ರಧಾನ ಧರ್ಮಗುರು ರೆ.ಫಾ ವಾಲ್ಟರ್ ಡಿಮೆಲ್ಲೋ ಹೇಳಿದರು.
ಇಲ್ಲಿನ ಚರ್ಚ್ ವಠಾರದಲ್ಲಿ ಆ.30 ರಂದು ನಡೆದ ಮಳೆ ನೀರು ಕೊಯಿಲು ಜನಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯಿಂದ ಅವರು ಆಶೀರ್ವಚನ ನೀಡಿದರು.ಚರ್ಚ್ ಪಾಲನಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಬಿ.ಸಿ ಟ್ರಸ್ಟ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್.ಎಸ್.ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಂಟಿ ಸಹಯೋಗ ನೀಡಿದವು.

ಪ್ರಸ್ತಾವನೆಗೈದ ಗ್ರಾ. ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್, ಜಲ ಸಂರಕ್ಷಣೆಯ ಮಾದರಿಯನ್ನು ಈ ಚರ್ಚ್ ನಲ್ಲಿ ಕಳೆದ ಮೂರು ವರ್ಷಗಳಿಂದ ಅನುಷ್ಠಾನಿಸಲಾಗಿದೆ. ಇದು ಮುಕ್ತ ವೇದಿಕೆಯಾಗಿದ್ದು ಇಲ್ಲಿ ಯಾರೂ ಕೂಡ ಬಂದು ಇದನ್ನು ಕಣ್ಣಾರೆ ಕಂಡು ಮಾಹಿತಿ ಪಡೆದು ಅನುಭವ ಪಡೆದುಕೊಳ್ಳಬಹುದು. ಇಲ್ಲಿ ಕಳೆದ ಬಾರಿ 25 ಲಕ್ಷ ಲೀಟರ್ ನೀರು ಶುದ್ದೀಕರಿಸಿ ಅಂತರ್ಜಲಕ್ಕೆ ಮರುಪೂರಣ ಮಾಡಲಾಗಿದೆ ಎಂದರು. ಪ್ರಧಾನ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಮಾತನಾಡಿ, 3 ಸಾವಿರ ಮಿ.ಮೀ ಮಳೆಯಾಗುವ ಕರಾವಳಿ ಜಿಲ್ಲೆಯವರಾದ ನಾವೂ ಕೂಡ ಇಂದು ಬೇಸಗೆಯಲ್ಲಿ ಜಲಕ್ಷ್ಯಾಮ ಎದುರಿಸುವಂತಾಗಿರುವುದು ಖೇದಕರ. ಮಳೆ ನೀರಿನ ಪ್ರತೀ ಹನಿಯ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯತೆಇದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕನಿಷ್ಠ ಖರ್ಚಿಗೆ ಮಳೆಕೊಯ್ಲು ಮಾಡಬಹುದದಾಗಿದೆ ಎಂದರು. ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರೆ. ಫಾ.ಕ್ಲಿರ್ಫಡ್ ಸೈಮನ್ ಪಿಂಟೊ ಮುಖ್ಯ ಅತಿಥಿಯಾಗಿದ್ದರು.
ಹೊಸಬೆಳಕು ಒಕ್ಕೂಟದ ಅಧ್ಯಕ್ಷರು ವಿನ್ಸೆಂಟ್ ಲೋಬೋ, ಚರ್ಚ್ ಪಾಲನಾ ಸಮಿತಿ ಆಯೋಗದ ಸಂಚಾಲಕ ತೋಮಸ್ ಪಿಂಟೊ ಹಾಗೂ ವಾಳೆಯ ಗುರಿಕಾರರು, ಕೃಷಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದು ಸಹಕರಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೊನಿಸ್ ಸ್ವಾಗತಿಸಿದರು.ರೆನ್ನಿ ಟೀಚರ್ ನಿರೂಪಿಸಿದರು. ಪಾಲನಾ ಸಮಿತಿ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ ಧನ್ಯವಾದವಿತ್ತರು.


