ಬೆಳ್ತಂಗಡಿ; “ಕರ್ನಾಟಕ ಟಿವಿ ಲೀಡರ್ ಅವಾರ್ಡ್ಸ್ 2025″ ರಡಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದ “ಉತ್ತಮ ಶಾಸಕ ಪ್ರಶಸ್ತಿ” ಪಡೆದಿರುವ ಶಾಸಕ ಹರೀಶ್ ಪೂಂಜ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ತಾಲೂಕಿನ ಮುಸ್ಲಿಂ ಮುಖಂಡರು ಅವರನ್ನು ಆ.30 ರಂದು ರವಿವಾರ ಅವರ ನಿವಾಸದಲ್ಲಿ ಅಭಿನಂದಿಸಿದರು. ಲಾಯಿಲ ಗ್ರಾಮದ ಕಕ್ಕೇನ ನಿವಾಸಿ ಮುಸ್ಲಿಂ ಮುಖಂಡ, ಸಿವಿಲ್ ಗುತ್ತಿಗೆದಾರ ಅಶ್ರಫ್ ಲಾಯಿಲ ಅವರ ನೇತೃತ್ವದಲ್ಲಿ ಶಾಸಕರ ಮನೆಗೆ ತೆರಳಿದ ನಿಯೋಗ ಅವರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದರು.
ಎಳೆಯ ಪ್ರಾಯದಲ್ಲೇ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಅತಿವೃಷ್ಟಿ, ಕೋವಿಡ್ ನಂತಹಾ ಅನೇಕ ಎಡರು ತೊಡರುಗಳನ್ನು ಸಮರ್ಥವಾಗಿ ನಿಭಾಯಿಸಿ ಜನಮೆಚ್ಚುಗೆ ಗಳಿಸಿದ ಶಾಸಕರು, ತಾಲೂಕಿನ ಸಮಗ್ರ ಅಭಿವೃದ್ದಿಯ ಕನಸುಹೊತ್ತು ತನ್ನ ಪಾಲಿನ ಅನುದಾನದಲ್ಲಿ ತಾರತಮ್ಯವೆಸಗದೆ ಹಂಚಿಕೆ ಮಾಡಿದ್ದಾರೆ. ಇತಿಹಾಸ ಪ್ರಸಿದ್ಧ ಕಾಜೂರು ಕ್ಷೇತ್ರಕ್ಕೆ 1.5 ಕೋಟಿ ರೂ. ಅನುದಾನ, ಮುಂಡಾಜೆ ಮಸ್ಜಿದ್, ಲಾಯಿಲ ಗ್ರಾಮದ ಕಕ್ಕ್ಯೇನ ಮಸ್ಜಿದ್ ಸಹಿತ ಅನೇಕ ಮಸ್ಜಿದ್ ಮತ್ತು ಮದರಸಗಳಿಗೆ ಸರಕಾರದಿಂದ ಹಾಗೂ ತನ್ನ ಸ್ವಂತ ನಿಧಿಯಿಂದ ಅನುದಾನ ಒದಗಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ.

ದಣಿವರಿಯದ ಶ್ರಮಿಕನಾಗಿ ಇಡೀ ತಾಲೂಕಿನ ಮೂಲೆ ಮೂಲೆಗೂ ಆಹೋರಾತ್ರಿ ಓಡಾಡಿ ಜನರ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರು, ವಾಸಿಸಲು ಸೂರು ಇವೆಲ್ಲವುಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಟ್ಟಿದ್ದಾರೆ. ಕಿಂಡಿ ಅಣೆಕಟ್ಟುಗಳ ಮೂಲಕ ರೈತರ ಮೊಗದಲ್ಲಿ ಮಂದಹಾಸ ತಂದವರೂ ಅಲ್ಲದೆ ಅಂತರ್ಜಲ ವೃದ್ಧಿಗೆ ದೀರ್ಘ ದೃಷ್ಟಿಯಿಂದ ಶಾಶ್ವತ ಯೋಜನೆ ರೂಪಿಸಿದ್ದಾರೆ ಎಂದು ಈ ಸಂದರ್ಭ ಮುಖಂಡರು ಶಾಕರರನ್ನು ಕೊಂಡಾಡಿದರು.


