
ಬೆಂಗಳೂರು: ಕೊಡಚಾದ್ರಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ಗೌಡ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ಗೆ ಹೋಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಉಲ್ಲಾಸ್ಗೌಡ ಅವರಿಗೆ ಮದುವೆ ನಿಶ್ಚಯವಾಗಿತ್ತು. ದೀಪ ಶಾಸ್ತ್ರ ಕೂಡ ನಡೆದಿತ್ತು. ಇದೇ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಆಗಬೇಕಿತ್ತು. ಡಿಸೆಂಬರ್ನಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಉಲ್ಲಾಸ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ನಿರ್ಮಲಾ ಹೆಸರಿನ ಮಕ್ಕಳ ಚಿತ್ರದ ಮೂಲಕ ಸಿನಿಮಾ ರಂಗಪ್ರವೇಶ ಮಾಡಿದ್ದರು. ಉಲ್ಲಾಸ್ ಕ್ಲಾಸ್ ಆಫ್ ಸಿನಿಮಾಸ್ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ, ಸಿನಿಮಾ ಸಂಬಂಧಿ ತರಬೇತಿ ನೀಡುತ್ತಿದ್ದರು.ಬೆಂಗಳೂರಿನ ವಿಜಯನಗರದ ಭಾ.ಮಾ.ಹರೀಶ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಉಲ್ಲಾಸ್ ತಂದೆ, ತಾಯಿ, ತಂಗಿಯನ್ನು ಅಗಲಿದ್ದಾರೆ.


