ಕಾರ್ಕಳ: ತಾಯಿಗೆ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಆರೋಪದಡಿ ತಂದೆಯ ವಿರುದ್ಧ ಮಗಳು ದೂರು ನೀಡಿದ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.
ನಿಟ್ಟೆ ಗ್ರಾಮದ ನಿವಾಸಿ ವಿಶಾಲಾಕ್ಷಿ (25) ಅವರು ತಮ್ಮ ತಂದೆಯ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಶಾಲಾಕ್ಷಿಯವರ ತಂದೆ ಧರ್ಮ ಹಾಗೂ ತಾಯಿ ಬೇಬಿ ಅವರು ಮನೆಯ ಸಮೀಪವೇ ವಾಸವಾಗಿದ್ದು, ಧರ್ಮ ಅವರು ಪ್ರತಿದಿನ ಪತ್ನಿ ಬೇಬಿಯವರೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಜೂನ್ 15ರಂದು ಸಂಜೆ ಸುಮಾರು 4.45 ಗಂಟೆಗೆ ಧರ್ಮ ಅವರು ಪತ್ನಿಯೊಂದಿಗೆ ಜಗಳವಾಡಿ, “ನಿನ್ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ ಬಳಿಕ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಬೇಬಿಯವರನ್ನು ಮೊದಲು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


