ಪುತ್ತೂರು; ಸ್ನೇಹಿತರೊಂದಿಗೆ ಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಯಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯುಟಿಕಲ್ ಕಾಲೇಜಿನ ತೃತೀಯ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿ ಕಿರಣ್ ಮೃತ ವಿದ್ಯಾರ್ಥಿ.

ಮೂಲತಃ ಗದಗ ಜಿಲ್ಲೆಯವರಾದ ಕಿರಣ್, ಸದ್ಯ ಕಲ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದ ಕಿರಣ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಗೆ ಸ್ನಾನ ಮಾಡಲು ಹಾಗೂ ಈಜಾಡಲು ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕಿರಣ್ ಕಣ್ಮರೆಯಾಗಿದ್ದರು. ತಕ್ಷಣವೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಹೊಳೆಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ಸುದೀರ್ಘ ಕಾರ್ಯಾಚರಣೆಯ ಬಳಿಕ ಕಿರಣ್ ಅವರ ಮೃತದೇಹ ಪತ್ತೆಯಾಗಿದೆ. ಕಠಾರ ಹೊಳೆಯ ತಟದಲ್ಲಿ ವಿದ್ಯಾರ್ಥಿಯ ಸಾವು ಸ್ನೇಹಿತರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


