ಬೆಳ್ತಂಗಡಿ : ಶಾಲಾ ಮಕ್ಕಳನ್ನು ಕಾನೂನು ಬಾಹಿರವಾಗಿ ಸರಕು ಸಾಗಣೆ ಮಾಡುವ ಪಿಕಪ್ ಮತ್ತು ಟಿಪ್ಪರ್ ವಾಹನದಲ್ಲಿ ಕರೆದುಕೊಂಡು ಹೋದ ಪ್ರಕರಣ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಎರಡು ವಾಹನ ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಫೆ.9ರಂದು KA-21-A-8776 ಪಿಕಪ್ ಮತ್ತು KA-70-2596 ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್ ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ವಿಡಿಯೋ ವೈರಲ್ ಅಗಿತ್ತು.
ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಮತ್ತು ಯೂಟ್ಯೂಬ್ ಚಾನಲ್ ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಫೆ.12 ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆಯ ಮಂಗಳೂರು ಡಿಡಿಪಿಐ ಶಿಶಿಧರ್.ಜಿ.ಎಸ್ ಅವರು ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಫೆ.12 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಅವರು ಪಿಕಪ್ ವಾಹನ ಚಾಲಕ ನವೀನ್, ಟಿಪ್ಪರ್ ಚಾಲಕ ಪ್ರವೀಣ ವಿರುದ್ಧ BNS 281,192(A),66 IMV ಅಡಿಯಲ್ಲಿ ಫೆ.12 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


