ಬೆಳ್ತಂಗಡಿ: ನಾರಾವಿಯಲ್ಲಿ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ನಿವಾಸಿ ಸುಧೀರ್ ಹಲ್ಲೆಗೆ ಒಳಗಾದ ವ್ಯಕ್ತಿ. ಸ್ಥಳೀಯ ನಿವಾಸಿಗಳಾದ ರಕ್ಷಿತ್ ಹಾಗೂ ಚೇತನ್ ಎಂಬವರು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ ಆರೋಪಿಗಳು.
ಸುಧೀರ್ ಮಧುಸೂದನ್ ಮತ್ತು ಯಶವಂತ್ ಫೆ.5ರಂದು ನಾರಾವಿ ಬೈದರ್ಕಳ ರಾತ್ರಿ ನೇಮೋತ್ಸವಕ್ಕೆ ಹೋಗಿದ್ದು ತಡರಾತ್ರಿ ನಾರಾವಿ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಇಲ್ಲಿಗೆ ಬಂದ ರಕ್ಷಿತ್ ಹಾಗೂ ಚೇತನ್ ಏಕಾಏಕಿಯಾಗಿ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಕೈಯಿಂದ ನಿರಂತರ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವೇಣೂರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಪೊಲೀಸರು ಆರೋಪಿಗಳ ವಿರುದ್ದ ಕಲಂ352,115(2),351(2)3(5) ಬಿಎನ್ ಎಸ್ ನಂತೆ ಕಲಂ 3(1)3(2)ಎಸ್.ಸಿ ಎಸ್.ಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


