ಬೆಳ್ತಂಗಡಿ :ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಮಾಹಿತಿ ಸಂಗ್ರಹದ ಕಾರ್ಯವನ್ನು ಮುಂದುವರಿಸಿದ್ದು ಅ.4 ರಂದು (ಶನಿವಾರ) ಬೆಳ್ತಂಗಡಿಯ ಇಬ್ಬರು ಸಮಾಜಸೇವಕ ಆಂಬ್ಯೂಲೆನ್ಸ್ ಚಾಲಕರನ್ನು ಕಚೇರಿಗೆ ಕರೆಸಿ ಅವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ.
ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಬೆಳ್ತಂಗಡಿ ಯಲ್ಲಿ ಆಂಬ್ಯೂಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿರುವ ಹಮೀದ್ ಹಾಗೂ ಜಲೀಲ್ ಬಾಬಾ ಅವರನ್ನು ಎಸ್.ಐ.ಟಿ ಕಚೇರಿಗೆ ಕರೆಸಿ ಮಾಹಿತಿಯನ್ನು ಪಡೆದುಕೊಂಡು ಹೇಳಿಕೆ ದಾಖಲಿಸುವ ಕಾರ್ಯ ಮಾಡಿದ್ದಾರೆ.
ಧರ್ಮಸ್ಥಳ ಹಾಗೂ ನೇತ್ರಾವತಿ ಸ್ನಾನಘಟದ ಪರಿಸರದಿಂದ ಮೃತದೇಹಗಳನ್ನು ತಂದಿರುವ ಬಗ್ಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೃತದೇಹಗಳ ಬಗ್ಗೆ ಅವರಿಗೆ ತಿಳಿದಿರುವ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರ ಹೇಳಿಕೆ ದಾಖಲಿಸುವ ಕಾರ್ಯ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೋಮವಾರವೂ ಕಚೇರಿಗೆ ಹಾಜರಾಗುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಮಾಹಿತಿ ನೀಡಿ ಎಸ್.ಐ.ಟಿ ಕಚೇರಿಯಿಂದ ಹೊರ ಬಂದ ಜಲೀಲ್ ಬಾಬಾ ಮತ್ತು ಹಮೀದ್ ಮಾದ್ಯಮಗಳೊಂದಿಗೆ ಮಾತನಾಡಿ ಹಿಂದಿನ ಘಟನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ.ಗೊತ್ತಿರುವ ಮಾಹಿತಿ ಗಳನ್ನು ನೀಡಿದ್ದೇವೆ. ಹಿಂದೆ ಪೊಲೀಸರು ಕರೆದ ಸಂದರ್ಭಗಳಲ್ಲಿ ಹಲವಾರು ಬಾರಿ ಧರ್ಮಸ್ಥಳದಿಂದ ಹಾಗೂ ಇತರ ಸ್ಥಳಗಳಿಂದ ಮೃತದೇಹಗಳನ್ನು ತಂದಿದ್ದೇವೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಅಥವಾ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದೇವೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸುವ ಕಾರ್ಯ ಪೂರ್ಣಗೊಳ್ಳದ ಹಿನ್ನಲೆಯಲ್ಲಿ (ಸೋಮವಾರ) ಅ.6 ರಂದು ಮತ್ತೆ ಎಸ್.ಐ.ಟಿ ಕಚೇರಿಗೆ ಬರುವಂತೆ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.


