ಉಡುಪಿ : ಶಿಕಾರಿ ವೇಳೆ ಅಜಾಗರೂಕತೆಯಿಂದಾಗಿ ಮನೆಯ ಬಾಗಿಲು ಹಾಗೂ ಕಾರಿಗೆ ಗುಂಡು ತಾಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32) ಮತ್ತು ಹಿರಿಯಡ್ಕದ ಗುಡ್ಡೆಯಂಗಡಿಯ ಮನೋಜ್ (25) ಬಂಧಿತರು.
ಸೆಪ್ಟೆಂಬರ್ 1ರಂದು ಆರೋಪಿಗಳು ಬೇಟೆಗೆ ತೆರಳಿದ್ದು ಈ ವೇಳೆ ಅಜಾಗರೂಕತೆಯಿಂದ ಹಾರಿಸಿದ ಗುಂಡು ಕಣಜಾರು ಗ್ರಾಮದ ಗುರುರಾಜ್ ಮಂಜಿತ್ತಾಯರವರ ಮನೆಯ ಕಾರಿನ ಗಾಜು ಹಾಗೂ ಮನೆಯ ಬಾಗಿಲಿಗೆ ತಾಗಿತ್ತು.ಅದರಂತೆ ದೂರು ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಪರವಾನಿಗೆ ರಹಿತ ತೋಟೆ ಕೋವಿ, ಏಳು ತೋಟೆಗಳು ಹಾಗೂ ₹40,000 ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಹೆಚ್ಚುವರಿ ಎಸ್ಪಿ ಸುಧಾಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿರಿಯಡ್ಕ ಉಪನಿರೀಕ್ಷಕ ಪುನೀತ್ ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು


