ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರ ತೋರಿಸಿದ 17 ನೇ ಪಾಯಿಂಟ್ ಹೊಸ ಸ್ಥಳದಲ್ಲಿ ಆ.14 ರಂದು ಅಗೆಯುವ ಕಾರ್ಯ ನಡೆಸಲು ಎಸ್.ಐಟಿ ತಂಡ ಮುಂದಾಗಿದೆ.
ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ನ ಒಳಗೆ 17 ನೇ ಪಾಯಿಂಟ್ ಸರಕಾರಿ ಜಾಗದಲ್ಲಿ ಶೋಧಕಾರ್ಯಕ್ಕಾಗಿ ಎಸ್.ಐ.ಟಿ ತಂಡ ಸಾಕ್ಷಿ ದೂರುದಾರನೊಂದಿಗೆ ತೆರಳಿದೆ. ನೇತ್ರಾವತಿ ನದಿ ಬದಿಯಲ್ಲಿರುವ ಈ ಕಂದಾಯ ಇಲಾಖೆಯ ಪ್ರದೇಶದಲ್ಲಿ ನದಿ ಬದಿಯಲ್ಲಿಯೇ ಈತ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಖಾಸಗಿ ಜಾಗದ ಗೇಟ್ ದಾಟಿ ಹೋಗಬೇಕಾಗಿದ್ದು ಈ ಹಿನ್ನಲೆಯಲ್ಲಿ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸ್ಥಳಕ್ಕೆ ಕರೆಸಿದ ಎಸ್.ಐ.ಟಿ ಅಧಿಕಾರಿಗಳು ಅವರಿಂದ ಅನುಮತಿಯನ್ನು ಪಡೆದುಕೊಂಡು ಗೇಟ್ ನ ಒಳಗೆ ಹೋಗುವ ಕಾರ್ಯ ಮಾಡಿದ್ದಾರೆ.
ಖಾಸಗಿ ಜಾಗದ ಗೇಟ್ ಗೆ ಬೀಗ ಹಾಕಲಾಗಿದ್ದು ಬೀಗ ತೆಗೆಯಲು ಸದ್ರಿ ತೋಟವನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಬರಬೇಕಾಗಿ ಬಂತು.ಎಸ್.ಐಟಿ ತಂಡ ಇವರಿಗೆ ಮೊದಲೆ ಮಾಹಿತಿ ನೀಡಿರದ ಕಾರಣ ತೋಟವನ್ನು ನೋಡಿಕೊಳ್ಳುವವರು ಸ್ಥಳದಲ್ಲಿ ಇರಲಿಲ್ಲ ಇದರಿಂದಾಗಿ ಅವರು ಬರಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗಿ ಬಂತು. ಬಳಿಕ ಗೇಟ್ ನ ಬೀಗದ ಕೀ ತರಿಸಿ ಗೇಟ್ ಅನ್ನು ತೆರೆದು 12:30 ಗಂಟೆಗೆ ಎಸ್.ಐ.ಟಿ ತಂಡ ಸ್ಥಳಕ್ಕೆ ತೆರಳಿದೆ.
ಸ್ಥಳ ಗುರುತಿಸುವ ವೇಳೆ ಇಲ್ಲಿಗೂ ಬಂದಿದ್ದ:ಎಸ್ಐ.ಟಿ ತಂಡ ಆರಂಭದಲ್ಲಿ ಸಾಕ್ಷಿ ದೂರುದಾರನೊಂದಿಗೆ ಸ್ಥಳ ಗುರುತಿಸಲು ಬಂದ ವೇಳೆ ಈ ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಭಾರೀ ಮಳೆ ಮತ್ತು ಸಂಜೆಯಾದ ಕಾರಣ ಸ್ಥಳ ಗುರುತಿಸುವ ಕಾರ್ಯವನ್ನು ಮಾಡದೆ ಎಸ್.ಐ.ಟಿ ತಂಡ ಹಿಂತಿರುಗುತ್ತು. ಇದೀಗ ಇದೇ ಸ್ಥಳಕ್ಕೆ ಎಸ್.ಐ.ಟಿ ತಂಡ ಸಾಕ್ಷಿ ದೂರುದಾರನೊಂದಿಗೆ ಆಗಮಿಸಿದ್ದು ಇಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.


