ಬಂಟ್ವಾಳ: ಇಷ್ಟು ದಿನ ಮನೆ, ದೇವಸ್ಥಾನ, ವಾಣಿಜ್ಯ ಮಳಿಗೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ಇದೀಗ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದಂತಿದೆ. ಸ್ಮಶಾನದಲ್ಲೂ ಕಳ್ಳತನ ಆರಂಭಿಸಿದ್ದಾರೆ.ಮ್ಮಾಡಿ ಗ್ರಾಮದ ದೇವಿನಗರ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಮೃತದೇಹ ಸುಡುವ ಸಿಲಿಕಾನ್ ಚೇಂಬರ್, ಹಿತ್ತಾಳೆಯ ನೀರಿನ ನಲ್ಲಿ, ಕಬ್ಬಿಣದ ಏಣಿ, ಕಬ್ಬಿಣದ ಗೇಟ್ ಹಾಗೂ ಇನ್ನಿತರ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಅಮ್ಮಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ್ ಅವರು ತಿಳಿಸಿದ್ದಾರೆ.
ಆಗಸ್ಟ್ 11 ರಂದು ಸ್ಥಳೀಯ ನಿವಾಸಿ ಐತ್ತಪ್ಪ ಪೂಜಾರಿ ಎಂಬವರ ಮೃತದೇಹದ ದಹನ ಮಾಡಲು ರುದ್ರಭೂಮಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಪ್ರಕರಣದ ಕುರಿತು ಅಮ್ಮಾಡಿ ಗ್ರಾಮ ಪಂಚಾಯತ್ ನ ವತಿಯಿಂದ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ವಿಜಯ್ ಅವರು ತಿಳಿಸಿದ್ದಾರೆ.
ಅಮ್ಮಾಡಿ ಗ್ರಾಮದಲ್ಲಿ ಕೆಲವು ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಮನೆಯ ಹೊರಗಡೆ ನಿಲ್ಲಿಸಿರುವ ವಾಹನಗಳ ಸಹಿತ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸಿ ಎಂದು ವಿಜಯ್ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.


