ಉಡುಪಿ: ಆದರ್ಶ ಆಸ್ಪತ್ರೆ ಉಡುಪಿ, ಆದರ್ಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯರಿಗೆ ಸನ್ಮಾನ ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿ, ” ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ವಿಶ್ವದ ಗಮನ ಸೆಳೆದಿದ್ದು, ಇಲ್ಲಿನ ಶಿಕ್ಷಕರು ಮತ್ತು ವೈದ್ಯರು ಸಂಬಳ ಪಡೆದರೂ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಸಮಾಜದ ಉನ್ನತಿಯಲ್ಲಿ ಈ ಎರಡೂ ಕ್ಷೇತ್ರಗಳ ಕೊಡುಗೆ ಮುಖ್ಯವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿದ್ ಗಡ್ಯಾಳ್, ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್, ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಹಿರಿಯ ವೈದ್ಯರಾದ ಪ್ರೊ. ಎನ್.ಆರ್. ರಾವ್, ಡಾ. ನಾಗರತ್ನ ಶಾಸ್ತ್ರಿ, ಡಾ. ರಾಮರಾವ್, ಡಾ. ವಾಸುದೇವ ಉಪಾಧ್ಯಾಯ, ಡಾ. ಪ್ರಶಾಂತ್ ಭಟ್, ಡಾ. ಶಶಿಕಿರಣ್ ಆಚಾರ್, ಡಾ. ಭವಾನಿ ಶಂಕರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಿಬಿರದ ಭಾಗವಾಗಿ, ಸಂಪೂರ್ಣ ರಕ್ತ ಎಣಿಕೆ (ಸಿಬಿಸಿ), ರಕ್ತದಲ್ಲಿನ ಸಕ್ಕರೆ, ಕೊಬ್ಬಿನ ಅಂಶ ಪರೀಕ್ಷೆಗಳು ಮತ್ತು ಯಕೃತ್ತಿನ ಸ್ಕ್ಯಾನಿಂಗ್ ಸೇರಿದಂತೆ ಉಚಿತ ಆರೋಗ್ಯ ತಪಾಸಣೆಗಳನ್ನು ತಜ್ಞ ವೈದ್ಯರು ನಡೆಸಿದರು. ಇದಲ್ಲದೆ, ವೈದ್ಯರ ಸಲಹೆಯಂತೆ ರೋಗಿಗಳಿಗೆ ಹೃದಯ ಸ್ಕ್ಯಾನಿಂಗ್ ಮತ್ತು ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಅನುಶ್ರೀ ನಿರ್ವಹಿಸಿದರು.