Saturday, June 6, 2026
Homeಕರಾವಳಿಉಡುಪಿಸೆಕೆಂಡ್‌ ಹ್ಯಾಂಡ್‌ ರೂಪದಲ್ಲಿ ದುಡ್ಡು ಕೊಟ್ಟು ಖರೀದಿಸಿದ ಬಸ್‌ ಅನ್ನು ಕದ್ದೊಯ್ದ ಮಾಲಕ 

ಸೆಕೆಂಡ್‌ ಹ್ಯಾಂಡ್‌ ರೂಪದಲ್ಲಿ ದುಡ್ಡು ಕೊಟ್ಟು ಖರೀದಿಸಿದ ಬಸ್‌ ಅನ್ನು ಕದ್ದೊಯ್ದ ಮಾಲಕ 

- Advertisement -
- Advertisement -

ಕಾಪು: ಬಸ್ ಅನ್ನು ಸೆಕೆಂಡ್‌ ಹ್ಯಾಂಡ್‌ ರೂಪದಲ್ಲಿ ಮಾರಿದ ಪೂರ್ವ ಮಾಲಕ ಮತ್ತು ಆತನ ತಂದೆ ಪ್ರಸ್ತುತ ಮಾಲಕನಿಂದ ಬಸ್ ಅನ್ನು ಕದ್ದೊಯ್ದಿರುವ ಘಟನೆಯ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೈಯದ್‌ ಗೌಸ್‌ ಎಚ್‌.ಎಸ್‌ ಎನ್ನಲಾಗಿದೆ. ವಂಚನೆ ಎಸಗಿದವರನ್ನು ಕಾಪುವಿನ ಸಮೀರ್‌ ಮತ್ತು ಆತನ ತಂದೆ ಅಬ್ದುಲ್‌ ಖಾದರ್‌ ಎನ್ನಲಾಗಿದೆ.

ಸೈಯದ್‌ ಗೌಸ್‌ ಎಚ್‌.ಎಸ್‌ 9 ಲಕ್ಷ ರೂ. ಅನ್ನು ನೀಡಿ  ಕಾಪುವಿನ ಸಮೀರ್‌ ನಿಂದ ಬಸ್ ಅನ್ನು ಖರೀದಿಸಿದ್ದರು. 

ಘಟನೆಯ ವಿವರ: ಸೈಯದ್‌ ಗೌಸ್‌ ಪರಿಚಿತರಾದ ಹನುಮಂತರಾಯಪ್ಪ ಅವರ ಮೂಲಕ ಓಎಲ್‌ಎಕ್ಸ್‌ನಲ್ಲಿ ಕಾಪುವಿನ ಸಮೀರ್‌ ನಂಬರ್ ಲಭ್ಯವಾಗಿದ್ದು, ನಂತರದಲ್ಲಿ ಆ ನಂಬರ್‌ಗೆ ಕರೆ ಮಾಡಿದಾಗ ತನ್ನ ಬಳಿ ಮಾರಾಟಕ್ಕೆ ಹಳೆ ಬಸ್ಸು ಇದೆಯೆಂದು, ಬಂದು ನೋಡಿ ಎಂದು ಹೇಳಿದ್ದ  ಎನ್ನಲಾಗಿದೆ. ಅದಾದ ಒಂದೆರಡು ದಿನಗಳ ಬಳಿಕ ಸೈಯದ್‌ ಗೌಸ್‌ ಎಚ್‌.ಎಸ್‌. ಅವರು ತನ್ನ ಮಗ ಸೈಯದ್‌ ಸಿದ್ದಿಕ್‌ ಬಾಷಾ ಮತ್ತು ಆತನ ಸ್ನೇಹಿತ ಜಾವೇದ್‌ ಅವರ ಜತೆಗೂಡಿ ಮಲ್ಲಾರಿಗೆ ಬಂದು ಸಮೀರ್‌, ಆತನ ತಂದೆ ಅಬ್ದುಲ್‌ ಖಾದರ್‌ ಅವರ ಮನೆಯ ಕಾಂಪೌಂಡ್‌ನ‌ಲ್ಲಿ 2017ನೇ ಮಾಡೆಲ್‌ನ ಬಸ್ಸನ್ನು ನೋಡಿದ್ದರು. ನಂತರದಲ್ಲಿ ಬಸ್‌ ಒಪ್ಪಿಗೆಯಾದ ಬಳಿಕ ಸಮೀರ್‌, ಆತನ ತಂದೆ ಅಬ್ದುಲ್‌ ಖಾದರ್‌ ಜತೆಗೆ ಮಾತುಕತೆ ನಡೆಸಿ 9.50 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದ್ದು ಅದರಂತೆ 2 ಲಕ್ಷ ರೂ. ಮುಂಗಡ ಹಣ ಕೊಟ್ಟಿದ್ದು, ಉಳಿದ ಹಣ 15 ದಿನಗಳ ಒಳಗಾಗಿ ಕೊಡಬೇಕು ಎಂದು ಹೇಳಿ ಒಂದು ಖಾಲಿ ಚೆಕ್‌ ಪಡೆದುಕೊಂಡು ಬಸ್‌ನ್ನು ನೀಡಿದ್ದರು. ಒಪ್ಪಂದದಂತೆ ಖರೀದಿದಾರರು ಬಸ್‌ ಅನ್ನು ತುಮಕೂರಿಗೆ ತೆಗೆದುಕೊಂಡು ಹೋಗಿದ್ದರು ಎನ್ನಲಾಗಿದೆ. 

ನಂತರದಲ್ಲಿ ಸೈಯದ್‌ ಗೌಸ್‌ ಎಚ್‌.ಎಸ್‌ ತಮ್ಮ ಫೋನ್‌ ಪೇ ಮೂಲಕ 2.80 ಲಕ್ಷ ರೂ. ಮತ್ತು ನಗದು ಮೂಲಕ 6.20 ಲಕ್ಷ ರೂ. ಹಣವನ್ನು ಒಟ್ಟು 9 ಲಕ್ಷ ರೂ. ಅನ್ನು ಬಸ್ಸಿನ ಆರ್‌ಸಿ, ಟ್ರಾನ್ಸ್‌ಫರ್‌ ಮಾಡಲು ಹಾಗೂ ಹಣಕಾಸಿನ ಸಮಸ್ಯೆ ಇದೆ ಎಂದು ಹೇಳಿ ಆರೋಪಿಗಳು ಪಡೆದುಕೊಂಡಿದ್ದರು. ಆರೋಪಿತರಾದ ಸಮೀರ್‌ ಮತ್ತು ಅವನ ತಂದೆ ಅಬ್ದುಲ್‌ ಖಾದರ್‌ ಈ ನಡುವೆ ಬಸ್‌ ಅನ್ನು ತಾನು ನಿಲ್ಲಿಸಿದ್ದ ಸ್ಥಳದಿಂದ ಕಳವು ಮಾಡಿಸಿ ವಾಪಸು ಕೊಂಡೊಯ್ದಿದ್ದು, ಈಗ ಅದನ್ನು ಮರಳಿಸದೇ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂದು ಸೈಯದ್‌ ಗೌಸ್‌ ಎಚ್‌.ಎಸ್‌. ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ಕುರಿತು ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ .

- Advertisement -

Latest News

error: Content is protected !!