ಚಾಮರಾಜಪೇಟೆ: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ ವಿನಾಯಕ ನಗರದ ಮನೆಯೊಂದರ ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಚಿವ ಜಮೀರ್ ಅಹಮದ್ ಖಾನ್ ಅವರು ಕುಟುಂಬಕ್ಕೆ ಮೂರು ಹಸುಗಳನ್ನ ಕೊಡಿಸಿದ್ದಾರೆ.
ಮಾಲೀಕ ಕರ್ಣ ಅವರು ಹಸು ಪಡೆಯಲು ಮೊದಲು ಒಪ್ಪಿಕೊಂಡಿದ್ದರೂ ಅನಂತರ ನಿರಾಕರಿಸಿದ್ದರು. ಆದರಿಂದ ಅವರ ತಾಯಿ ಸವರಿ ಅಮ್ಮಳ್, ಮತ್ತು ಸಹೋದರಿ ಅಮುದಾ ಅವರು ಈ ಮೂರು ಹಸುಗಳನ್ನು ಪಡೆದುಕೊಂಡರು.
ಸಚಿವರು ಸುಮಾರು ₹3 ಲಕ್ಷ ವೆಚ್ಚದಲ್ಲಿ ಮೂರು ಹಸು ಖರೀದಿಸಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.
ಹಸುವನ್ನು ಪಡೆದುಕೊಂಡ ನಂತರ ಈ ಕುರಿತಂತೆ ಅಮುದಾ ಮಾತನಾಡಿ, ‘ನನ್ನ ಸಹೋದರ ಹಸು ನಿರಾಕರಿಸಿದಕ್ಕೆ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ನಾವು ಶಾಸಕರ ಜೊತೆಗಿದ್ದೇವೆ’ ಎಂದು ತಿಳಿಸಿದರು.