ಹೆಬ್ರಿ: ನಕ್ಸಲ್ ನಾಯಕ ವಿಕ್ರಂ ಗೌಡನನ್ನು ತಾಲೂಕಿನ ನಾಡಪಾಲ್ ಗ್ರಾಮದ ಪೀತಬೈಲು ಎಂಬಲ್ಲಿ ಎನ್ಕೌಂಟರ್ ಮಾಡಲಾಗಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಿನಾಲೆ, ಮತ್ತಾವು, ನಾಡ್ಪಾಲು, ಪೀತಬೈಲು ಸುತ್ತಮುತ್ತ ಶೋಧ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ.
ಈ ಪ್ರಕರಣದ ತನಿಖೆಯನ್ನು ಹೆಬ್ರಿ ಪೊಲೀಸ್ ಠಾಣೆಗೆ ನೀಡಲಾಗಿದೆ. ಶೋಧ ಕಾರ್ಯಾಚರಣೆಯನ್ನು ಡಿವೈಎಸ್ಪಿ ನೇತೃತ್ವದಲ್ಲಿ ಹೆಬ್ರಿ ಪೊಲೀಸರು ಹಾಗೂ ಎಎನ್ಎಫ್ ಸಿಬ್ಬಂದಿ ಎನ್ಕೌಂಟರ್ ಪ್ರದೇಶದ ಸುತ್ತಮುತ್ತ ನಡೆಸುತ್ತಿದ್ದು, ವಿಕ್ರಂ ಗೌಡನೊಂದಿಗೆ ಇದ್ದ ನಕ್ಸಲರು ತಪ್ಪಿಸಿಕೊಂಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಕಬ್ಬಿನಾಳೆ ಪ್ರದೇಶದ ಸುತ್ತಮುತ್ತಲಿನ ಜನ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣದ ಬಳಿಕ ಭಯಭೀತರಾಗಿದ್ದು, ಎನ್ಕೌಂಟರ್ ಘಟನೆ ನಡೆದ ಮನೆಯ ವಾರಸುದಾರರು ಇನ್ನು ಕೂಡ ಮನೆ ಕಡೆ ತೆರಳಿಲ್ಲ. ಮನೆಯಲ್ಲಿ ಪೂಜಾ ಕಾರ್ಯ ಮಾಡಿ ನಂತರದಲ್ಲಿ ಮನೆಗೆ ಪ್ರವೇಶ ಮಾಡುತ್ತಾರೆ ಎನ್ನಲಾಗುತ್ತಿದೆ. ಇನ್ನು ಪಕ್ಕದ ಮನೆಯಲ್ಲಿ ಎಎನ್ಎಫ್ ತಂಡ ಬಿಡು ಬಿಟ್ಟಿದ್ದು, ಈ ಮನೆಯಲ್ಲಿ ವಾಸಿಸುವವರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ.
ಈ ಘಟನೆ ನಡೆದ ಬಳಿಕ ಕಬ್ಬಿನಾಳೆ ಪ್ರದೇಶದ ಜನರು ಇನ್ನು ಕೂಡ ಸಹಜ ಸ್ಥಿತಿಯತ್ತ ಮರಳಿಲ್ಲ ಎನ್ನಲಾಗಿದೆ.


