ಪುತ್ತೂರು: ಯುವಕನೋರ್ವ ಬಾಲಕಿಯ ಜೊತೆಗೆ ಒಂಭತ್ತು ವರ್ಷದ ಹಿಂದೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪುತ್ತೂರು ಫೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಧ ಸರಿತಾ ಡಿ. ಅವರ ಪೀಠ ಆರೋಪಿಗೆ ಶಿಕ್ಷೆ ಸಹಿತ ದಂಡ ವಿಧಿಸಿದೆ.
ಶಿಕ್ಷೆಗೆ ಒಳಗಾದ ಆರೋಪಿ ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ ಶೇಖ್. ಈತ 2015ರ ಡಿ. 4ರಂದು ಕಬಕ ಗ್ರಾಮದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಯನ್ನು ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದು, ಈ ಸಂದರ್ಭದಲ್ಲಿ ಬಾಲಕಿ ತಪ್ಪಿಸಿಕೊಂಡು ಹೋಗಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಬಾಲಕಿ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ14 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ 3 ವರ್ಷ ಜೈಲು ಮತ್ತು 21,400 ರೂ. ದಂಡ ನೀಡಲು ಆದೇಶಿಸಲಾಗಿದೆ.
ಇನ್ನು ಆರೋಪಿಗೆ ದಂಡ ವಿಧಿಸಲಾಗಿರುವ ಮೊತ್ತದಲ್ಲಿ 15 ಸಾವಿರ ರೂ. ಅನ್ನು ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.


