ಕಡಬ; ಪ್ರತಿದಿನ ಸಾವಿರಾರು ಜನ ಭೇಟಿ ಕೊಡೋ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ರಸ್ತೆ ಸ್ಥಿತಿ ದೇವರಿಗೇ ಪ್ರೀತಿ ಅನ್ನೋ ಹಾಗಾಗಿದೆ. ಕುಮಾರಧಾರ – ಕೈಕಂಬ ರಸ್ತೆ ನೋಡಿದ್ರೆ ಇದು ರಸ್ತೆಯೋ ಇಲ್ಲ ಹೊಂಡನೋ ಎಂದು ಹುಡುಕುವಂತಾಗಿದೆ.
ಇದೀಗ ರಸ್ತೆಯ ಅವಸ್ಥೆ ನೋಡಿ ಬೇಸತ್ತಿರೋ ಸ್ಥಳೀಯರು ವ್ಯಂಗ್ಯಯುತವಾದ ಬ್ಯಾನರ್ ಒಂದನ್ನು ಅಳವಡಿಸಿದ್ದಾರೆ. ಬ್ಯಾನರ್ ನಲ್ಲಿಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮದ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೇಯೇ ಬಿಟ್ಟಿದ್ದಾರೆ , ನಿಧಾನವಾಗಿ ಚಲಿಸಿ” ಎಂದು ಬರೆದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಮೊನ್ನೆ ಮೊನ್ನೆ ಸ್ಥಳೀಯ ವಾಹನ ಸವಾರರು ರಸ್ತೆಯಲ್ಲೇ ಟೇಪ್ ಹಿಡಿದು ಅಳತೆ ಮಾಡಿ ಸುದ್ದಿಯಾಗಿದ್ದರು.ಈ ವೇಳೆ ಕುಮಾರಧಾರ ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ, ಮೂರು ಫೀಟ್ ಆಳದ ಹೊಂಡ ಪತ್ತೆಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗುಂಡಿಗೆ ಕ್ರಷರ್ ಹಾಕಿ ಮುಚ್ಚಿದ್ದರು. ಇದೀಗ ಮತ್ತೆ ಗುಂಡಿಗಳು ಮತ್ತೆ ವಾಹನ ಸವಾರರಿಗೆ ತಲೆನೋವಾಗಿದೆ. ಹಾಗಾಗಿ ಸ್ಥಳೀಯರು ಬ್ಯಾನರ್ ಮೊರೆ ಹೋಗಿದ್ದಾರೆ.